ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಕುರಿತು ಪ್ರಚೋದನಾಕಾರಿ ಭಾಷಣ ಮಾಡಿದ್ದನ್ನು ಖಂಡಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಾಂಡೇಲಿ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ದೂರು ದಾಖಲಿಸಿದರು.
ಮನವಿಯಲ್ಲಿ ಅಸ್ಸಾಂನಲ್ಲಿ ಚುನಾವಣಾ ಭಾಷಣ ಮಾಡುವಾಗ ಕಾಂಗ್ರೆಸ್ ಪಕ್ಷದ ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮಾಜ್ ಮಾಡುವಾಗ ವಿಷಸರ್ಪ ಬಂದರೆ ನೀವು ನಮಾಜನ್ನು ನಿಲ್ಲಿಸಿ ಅದನ್ನು ಕೊಲ್ಲಿ; ನಮಾಜ್ ಮಾಡುವಾಗ ಬಿಜೆಪಿ, ಆರೆಸ್ಸೆಸ್ನವರು ಬಂದರೆ ನಮಾಜನ್ನು ನಿಲ್ಲಿಸಿ ಅವರನ್ನು ಕೊಲ್ಲಿ; ಇದು ಕುರಾನ್ನಲ್ಲಿ ಉಲ್ಲೇಖ ಆಗಿದೆ ಎಂದಿದ್ದಾರೆ. ಇದು ಬೆಂಕಿ ಹಚ್ಚುವ ಕೆಲಸವಾಗಿರುತ್ತದೆ. ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ದಾಂಡೇಲಿ ನಗರ ಠಾಣೆಯಲ್ಲಿ ಡಿವೈಎಸ್ಪಿ ಶಿವಾನಂದ ಮದರಕಂಡಿಯವರ ಮೂಲಕ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಶಿವಾನಂದ ನಾವದಗಿ ಅವರ ಮೂಲಕ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಬುದವಂತಗೌಡ ಪಾಟೀಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಿಥುನ್ ನಾಯಕ, ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರೋಷನ್ ನೇತ್ರಾವಳಿ, ಯುವ ಮೋರ್ಚಾ ಅಧ್ಯಕ್ಷ ಪವನ್ ಕೊಣ್ಣೂರು, ಪಕ್ಷದ ಮುಖಂಡರಾದ ಚಂದ್ರಕಾಂತ ಕ್ಷೀರಸಾಗರ, ರಮೇಶ ಹೊಸಮನಿ, ಮಂಜು ಶೆಟ್ಟಿ, ಹನುಮಂತ ಖಾರ್ಗಿ, ಅಪ್ಪಸಾಹೇಬ ಕಾಂಬಳೆ, ಉಮಾ ಹನುಮಸಾಗರ, ಸಂತೋಷ ಬುಲಬುಲೆ. ಈರಯ್ಯಾ ಸಾಲಿಮಠ, ಪುನಿತ್ ನಾಯ್ಕ, ಜ್ಯೋತಿಬಾ ಪಾಟೀಲ್, ಸಂತೋಷ ಚೌಡಿ, ನಮನ ಶೆಟ್ಟಿ, ರವಿ, ಶ್ಯಾಮ, ಚೇತನ, ಪ್ರದೀಪ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment