ದಾಂಡೇಲಿ : ಕಳೆದ 46 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ನಿದಾ ಇ ತೌಹೀದ್ ಸೊಸೈಟಿ ಚಾರಿಟೇಬಲ್ ಸಂಸ್ಥೆಯ ಬೆಳವಣಿಗೆಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ, ಶಾಸಕ ಆರ್.ವಿ. ದೇಶಪಾಂಡೆ, ದಾಂಡೇಲಿಯ ಸಾರ್ವಜನಿಕರು, ವಿದ್ಯಾರ್ಥಿ ಪಾಲಕರು, ಪೋಷಕರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ನಗರದ ನಿದಾ-ಇ ತೌಹೀದ್ ಸೊಸೈಟಿ ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷ ಹಾಜಿ ಮಹಮ್ಮದ್ ಇಕ್ಬಾಲ್ ಕಾಸಿಂ ಖಾನ್ ಹೇಳಿದರು.
ಅವರು ತೌಹೀದ್ ಶಿಕ್ಷಣ ಸಂಸ್ಥೆಯ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯೂ ತನ್ನ ಸಿಎಸ್ಆರ್ ಯೋಜನೆಯಡಿ 2019-20 ರಲ್ಲಿ ಸಂಸ್ಥೆಯ ಪ್ರೌಢಶಾಲೆಗೆ 30 ಡೆಸ್ಕ್ ಮತ್ತು ಬೆಂಚುಗಳನ್ನು, 2020-21ರಲ್ಲಿ ವಾಟರ್ ಕೂಲರ್, ಕಬಾಟು ಮತ್ತು ಕಂಪ್ಯೂಟರ್ ಗಳನ್ನು, 2021- 22 ರಲ್ಲಿ ವಾಟರ್ ಫಿಲ್ಟರ್, 2022 – 23ರಲ್ಲಿ ಸಂಸ್ಥೆಯ ಪ್ರಾಥಮಿಕ ಶಾಲೆಗೆ 30 ಡೆಸ್ಕ್ ಮತ್ತು ಬೆಂಚುಗಳನ್ನು, 2023 -24ರ ಸಾಲಿನಲ್ಲಿ ಸಂಸ್ಥೆಯ ಶಾಲೆ ಮತ್ತು ಕಾಲೇಜು ಕಟ್ಟಡದ ಪೇಂಟಿಂಗ್ ಕಾರ್ಯ, 2024 – 25 ನೇ ಸಾಲಿನಲ್ಲಿ ಸಂಸ್ಥೆಯ ಗಾಂಧಿನಗರದಲ್ಲಿರುವ ಶಾಲೆಗೆ ವಿಶಾಲವಾದ ಶಾಲಾ ಕೊಠಡಿಯನ್ನು ಹಾಗೂ 2025 – 26 ನೇ ಸಾಲಿನಲ್ಲಿ ವಾಶ್ರೂಮ್ ಮತ್ತು ಶೌಚಾಲಯಗಳನ್ನು ನಿರ್ಮಿಸಿಕೊಡುವ ಮೂಲಕ ನಮ್ಮ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಬಹುದೊಡ್ಡ ನೆರವನ್ನು ನೀಡಿದೆ. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ರ ಮಾರ್ಗದರ್ಶನ ಮತ್ತು ನಿರ್ದೇಶನದಡಿ ಅತ್ಯಂತ ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ವಿವಿಧ ಸಮಾಜಮುಖಿ ಹಾಗೂ ಜನಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಅತ್ಯಂತ ಅಭಿನಂದನೀಯ ಕಾರ್ಯವಾಗಿದೆ. ಕಂಪನಿಯ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಘವೇಂದ್ರ ಜೆ.ಆರ್ ಮತ್ತು ರಾಜೇಶ್ ತಿವಾರಿಯವರ ನೇತೃತ್ವದಲ್ಲಿ ಸಿಎಸ್ಆರ್ ಯೋಜನೆಯ ಕಾರ್ಯ ಚಟುವಟಿಕೆಗಳು ಅತ್ಯಂತ ಫಲಪ್ರದಾಯಕವಾಗಿ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಖಾಜಿ, ಕಾರ್ಯದರ್ಶಿ ಅಬ್ದುಲ್ ರಹೀಮ್ ಪಾರುಮಿಯಾ, ಸಂಸ್ಥೆಯ ಪದಾಧಿಕಾರಿಗಳಾದ ಅಬ್ದುಲ್ ಸತ್ತಾರ್ ಖಾಜಿ, ಆದಂ ಜೆ.ಶೇಖ ರಿಯಾಜ್ ಬಾಬು ಸೈಯದ್, ಹಸನ್ ಖಾನ್, ಎಂ.ಜಿ.ಎಂ ಖತೀಬ್, ಸಂಸ್ಥೆಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಯಾಸ್ಮಿನ್ ಬೇಗ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಂಶೇರ್ ಖಾನ್ ಮುಂತಾದವರಿದ್ದರು.

Be the first to comment