ಬೀದರನಲ್ಲಿ ಕಾರ್ಯನಿರತ ಪತ್ರಕರ್ತರ 40 ನೇ ರಾಜ್ಯ ಸಮ್ಮೇಳನ

ಬೀದರ್ ನಗರದಲ್ಲಿ ಏ.11 ಮತ್ತು 12 ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ 5 ಸಾವಿರ ಪತ್ರಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ಬೀದರ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, “ರಾಜ್ಯದ ಎಲ್ಲ ಜಿಲ್ಲೆಗಳಿಂದ ಪತ್ರಕರ್ತರು ಬರಲಿದ್ದಾರೆ. ಪತ್ರಕರ್ತರಿಗೆ ವಸತಿ, ಆಹಾರ ಸೇರಿದಂತೆ ಯಾವುದೇ ರೀತಿಯ ತೊಂದರೆ ಆಗದಂತೆ ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲು ಸರ್ವಸಿದ್ಧತೆ ನಡೆದಿದೆ” ಎಂದು ತಿಳಿಸಿದರು.

“ಏ.11 ರಂದು ಬೆಳಿಗ್ಗೆ 11ಕ್ಕೆ ಝೀರಾ ಕನ್ವೆನ್ಶನ್ ಹಾಲ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದಾರೆ. ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಹಾಗೂ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಭಾಗವಹಿಸಲಿದ್ದಾರೆ” ಎಂದು ಹೇಳಿದರು.

ʼಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹಾಗೂ ಮಾಧ್ಯಮ, ಗಾಂಧಿ ಮತ್ತು ಅಂಬೇಡ್ಕರ್, ಎ.ಐ. ಸೇರಿ ನಾಲ್ಕು ಗೋಷ್ಠಿಗಳು ಜರುಗಲಿವೆ. ಸಂಘದ ಪ್ರಶಸ್ತಿಗಳ ಪ್ರದಾನವೂ ನಡೆಯಲಿದೆ. ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9ಕ್ಕೆ ಬಸವೇಶ್ವರ ವೃತ್ತದಿಂದ ಝೀರಾ ಕನ್ವೆನ್ಶನ್ ಹಾಲ್‍ವರೆಗೆ ಭವ್ಯ ಮೆರವಣಿಗೆ ನಡೆಸಲು ನಿರ್ಣಯಿಸಲಾಗಿದೆ. 40ನೇ ಸಮ್ಮೇಳನದ ಅಂಗವಾಗಿ ಮೆರವಣಿಗೆಯಲ್ಲಿ 40 ಬೃಹತ್ ಕೊಡೆಗಳು ಗಮನ ಸೆಳೆಯಲಿವೆ.

ಜಿಲ್ಲೆಯಲ್ಲಿ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಸಮ್ಮೇಳನ ಸಿದ್ಧತಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಸಮ್ಮೇಳನವನ್ನು ಸರ್ವ ರೀತಿಯಿಂದಲೂ ಯಶಸ್ವಿಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ ಮಾಹಿತಿ ನೀಡಿದರು.

ಜಿಲ್ಲಾ ಅಡಾಕ್ ಸಮಿತಿ ಸದಸ್ಯರಾದ ಅಪ್ಪಾರಾವ್ ಸೌದಿ, ಶಿವಕುಮಾರ ಸ್ವಾಮಿ, ಮೆರವಣಿಗೆ ಸಮಿತಿಯ ಪ್ರಧಾನ ಸಂಚಾಲಕ ಡಾ. ರಜನೀಶ್ ವಾಲಿ, ಸಂಚಾಲಕ ವಿಜಯಕುಮಾರ ಸೋನಾರೆ, ಸಹ ಸಂಚಾಲಕ ನಂದಕುಮಾರ ಕರಂಜೆ, ವಸತಿ ಸಮಿತಿಯ ಸಂಚಾಲಕ ಶ್ರೀಕಾಂತ ಪಾಟೀಲ, ಸಹ ಸಂಚಾಲಕ ಸಂತೋಷ್ ಚೆಟ್ಟಿ, ಸಾರಿಗೆ ಸಮಿತಿಯ ಪ್ರಧಾನ ಸಂಚಾಲಕ ಪೃಥ್ವಿರಾಜ್ ಎಸ್., ಸಂಚಾಲಕ ಸುನೀಲ್ ಕುಲಕರ್ಣಿ, ಛಾಯಾಚಿತ್ರ ಪ್ರದರ್ಶನ ಸಮಿತಿಯ ಪ್ರಧಾನ ಸಂಚಾಲಕ ಗೋಪಿಚಂದ್ ತಾಂದಳೆ, ಶಿಸ್ತು ಪಾಲನಾ ಹಾಗೂ ಸ್ವಯಂ ಸೇವಕರ ಸಮಿತಿಯ ಪ್ರಧಾನ ಸಂಚಾಲಕ ಎಂ.ಪಿ. ಮುದಾಳೆ, ಹಿರಿಯ ಪತ್ರಕರ್ತರಾದ ಅಶೋಕುಮಾರ ಕರಂಜಿ, ಬಸವರಾಜ ಕಾಮಶೆಟ್ಟಿ, ಅನಿಲ್ ಪಾಟೀಲ ಹಾಲಹಿಪ್ಪರ್ಗಾ, ಸಿದ್ರಾಮಯ್ಯ ಸ್ವಾಮಿ, ಹಾಜಿಪಾಶಾ, ಧಮೇಂದ್ರ ಪೂಜಾರಿ, ಮಾಣಿಕೇಶ್ ಪಾಟೀಲ, ಪ್ರವೀಣ್ ಮೇತ್ರೆ, ಸತೀಶ್ ತುಪ್ಪದ್ ಮತ್ತಿತರರು ಇದ್ದರು.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*