ವೃದ್ಧ ಅಂಗವಿಕಲ ಮಹಿಳೆಯನ್ನು ಅತ್ಯಾಚಾರ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಫೈರೋಜ್ ಯರಗಟ್ಟಿ ಖತರ್ನಾಕ್ ರೌಡಿಶೀಟರ್

ದಾಂಡೇಲಿ : ದೇಶದ ವಿವಿಧಡೆಯ ಜನಸಮುದಾಯದವರು ವಾಸವಾಗಿರುವ ದಾಂಡೇಲಿ ಉದ್ಯಮ ನಗರಿಷ್ಟೇ ಅಲ್ಲ ಸೌಹಾರ್ದ ನಗರಿ ಕೂಡ. ಇದನ್ನ ಮಿನಿ ಇಂಡಿಯಾ ಎಂದು ಕೂಡ ಕರೆಯುತ್ತಾರೆ. ಇಲ್ಲಿ ದೊಡ್ಡ ಪ್ರಮಾಣದ ಕ್ರೈಂ ನಡೆಯುವುದು ಬಹಳ ಅಪರೂಪ. ಏನೆಲ್ಲ ನಡೆದರೂ ಇದುವರೆಗೂ ಶೂಟ್ ಔಟ್ ಅಥವಾ ಗುಂಡಿನ ಸದ್ದು ಕೇಳಿರಲಿಲ್ಲ. ಇದೇ ಮೊದಲ ಬಾರಿಗೆ ಹಲ್ಲೆಗೆ ಮುಂದಾದ ಆರೋಪಿಯೊಬ್ಬನ ಮೇಲೆ ಪೊಲೀಸರು ಗುಂಡೇಟಿನ ದಾಳಿ ನಡೆಸಿದ್ದು ದಾಂಡೇಲಿಯ ಇತಿಹಾಸದಲ್ಲಿ ದಾಖಲಾದಂತಾಗಿದೆ.

ನಿಜಕ್ಕೂ ದಾಂಡೇಲಿಯ ಜನ ಇಂತಹದೊಂದು ಘಟನೆ ನಡೆಯಬಹುದೆಂದು ಎಣಿಸಿರಲಿಲ್ಲ. ಹಾಗೆಂದು ನಡೆದ ಘಟನೆಯ ಬಗ್ಗೆ ಯಾರಿಗೂ ಬೇಸರವಿಲ್ಲ. ತೀರ ಕ್ರೂರ ಸ್ವಭಾವದ, ಕ್ರಿಮಿನಲ್ ವ್ಯಕ್ತಿತ್ವದ, ಕತರ್ನಾಕ್ ರೌಡಿಶೀಟರ್ ಫೈರೋಜ್ ಯಾಸಿನ್ ಯರಗಟ್ಟಿಯ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರ ಸಮಯೋಚಿತ ಕಾರ್ಯವನ್ನು ದಾಂಡೇಲಿಯ ಜನ ಅಭಿನಂದಿಸುತ್ತಿದ್ದಾರೆ. ನಿಜಕ್ಕೂ ಈ ಶೂಟೌಟ್ ಪ್ರಕರಣ ಕ್ರಿಮಿನಲ್ ಹಿನ್ನೆಲೆಯ ಜನಗಳಿಗೆ, ಆಗಾಗ ಕಿರಿಕ್ ಮಾಡುತ್ತಿರುವ ರೌಡಿಶೀಟರ್ ಗಳಿಗೆ, ಮರಿ ಪುಡಾರಿಗಳಿಗೆ ಎಚ್ಚರಿಕೆಯ ಗಂಟೆ ಎಂದೇ ಹೇಳಲಾಗುತ್ತಿದೆ.

ನಡೆದಿದ್ದೇನು…?
ಜೂನ್ 12ರಂದು ದಾಂಡೇಲಿ ಗೆ ಹತ್ತಿರದ ಬೈಲಪಾರ ಸಮೀಪದ ಅರಣ್ಯ ಪ್ರದೇಶದಲ್ಲಿ ಫೈರೂಜ್ ಯರಗಟ್ಟಿ ಎಂಬ ಯುವಕ ಪರಿಶಿಷ್ಟ ಜಾತಿಯ ಓರ್ವ ಅಂಗವಿಕಲ ವೃದ್ಧ ಮಹಿಳೆಯನ್ನ ಎಳೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಮಾಡಿದ್ದ. ನಗರ ಠಾಣೆಯಲ್ಲಿ ಅತ್ಯಾಚಾರ , ದರೋಡೆ ಹಾಗೂ ಜಾತಿ ನಿಂದನೆಯ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನ ಬಂಧಿಸಲೆಂದು ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ದಾಂಡೇಲಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್ ಖಚಿತ ಸುಳಿವಿನ ಮೇರೆಗೆ ತನ್ನ ಸಿಬ್ಬಂದಿಗಳಾದ ಕೃಷ್ಣಪ್ಪ ಬೆಳ್ಳಿವರಿ ಹಾಗೂ ಇಮ್ರಾನ್ ಕಂಬಾರಗಣವಿಯವರ ಜೊತೆ ಕುಳಗಿ ರಸ್ತೆಯ ಕಾನಶಿರಡಾ ಬಳಿ ದಾಳಿ ನಡೆಸಿದ್ದರು. ಪೊಲೀಸ್ ವಾಹನದ ಮೇಲೆ ಹೋದರೆ ಅನುಮಾನ ಬರಬಹುದೆಂದು ಪಿ.ಎಸ್.ಐ. ಕಿರಣ್ ಪಾಟೀಲ್ ತಮ್ಮ ಸ್ವಂತದ ಕಾರನ್ನು ತಾವೇ ಡ್ರೈವಿಂಗ್ ಮಾಡಿಕೊಂಡು ಹೋಗಿದ್ದರು. ಕಾಡಿನಲ್ಲಿದ್ದ ಫೈರೋಜ್ ಯರಗಟ್ಟಿ ಪೊಲೀಸರ ಆಗಮನದ ಸುಳಿವು ಸಿಕ್ಕಂತೆಯೇ ಪೊಲಿಸ್ ಸಿಬ್ಬಂದಿಗಳಾದ ಇಮ್ರಾನ್ ಮತ್ತು ಕೃಷ್ಣಪ್ಪ ಅವರ ಮೇಲೆ ಕಲ್ಲುತೂರಾಟ ನಡೆಸಿದ. ಹಿಡಿಯಲು ಹೋದ ಅವರ ಮೇಲೆ ತನ್ನ ಕಿಸೆಯಲ್ಲಿದ್ದ ಚಾಕು ತೆಗೆದು ಹಲ್ಲೆ ಮಾಡಲಾರಂಭಿಸಿದ. ಘಟನೆಯ ತೀವ್ರತೆ ಅರಿದ ಪಿಎಸ್ಐ ಕಿರಣ್ ಪಾಟೀಲ್ ತಕ್ಷಣ ಕಾರಿನಿಂದ ಇಳಿದು ಫೈರೋಜಗೆ ಶರಣಾಗುವಂತೆ ಸೂಚಿಸಿದ್ದಾರೆ. ಗಾಳಿಯಲ್ಲಿ ಎರಡು ಸುತ್ತಿನ ಗುಂಡು ಹಾರಿಸಿ ಮೊದಲು ಎಚ್ಚರಿಕೆಯನ್ನು ನೀಡಿದ್ದಾರೆ. ಶರಣಾಗದ ಫೈರೋಜ್ ಪಿಎಸ್ಐ ಕಿರಣ್ ಪಾಟೀಲ್ ಅವರ ಮೇಲೆಯೂ ಕಲ್ಲುತೂರಾಟ ನಡೆಸಿದ್ದಾನಲ್ಲದೇ , ಆತನನ್ನು ಹಿಡಿಯಲು ಮುಂದಾದಾಗ ಚಾಕುವಿನಿಂದ ಕಿರಣ್ ಪಾಟೀಲ್ ಅವರ ಕುತ್ತಿಗೆ ಮತ್ತು ಕೈಯನ್ನು ಕೂಡ ಗಾಯಗೊಳಿಸಿದ್ದಾನೆ. ಆ ಸಂದರ್ಭದಲ್ಲಿ ಕಿರಣ್ ಪಾಟೀಲ್ ಜೀವ ರಕ್ಷಣೆಗಾಗಿ ಆರೋಪಿ ಫೈರೋಜನ ಎಡಗಾಲಿಗೆ ಗುಂಡು ಗುರಿಯಾಗಿಸಿದ್ದಾರೆ. ಫೈರೋಜ್ ನೆಲಕ್ಕೆ ಬಿದ್ದಿದ್ದ. ಆಗ ಕಿರಣ್ ಪಾಟೀಲ್ ಹಾಗೂ ಸಿಬ್ಬಂದಿಗಳು ರಕ್ತಸ್ರಾವ ಆಗದಂತೆ ಆತನ ಕಾಲಿಗೆ ಬಟ್ಟೆ ಸುತ್ತಿ ತಕ್ಷಣ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಗೊಂಡಿದ್ದ ಕಿರಣ ಪಾಟೀಲ ಹಾಗೂ ಸಿಬ್ಬಂದಿಗಳೂ ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದರು. ಇದಕ್ಕೆ ಸಂಬಂಧಪಟ್ಟಂತೆ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಆರೋಪಿ ಫೈರೋಜ್ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಹಾಗೂ ಜೀವ ಬಿದರಿಕೆ ಹಾಕಿದ ಪ್ರಕರಣ ದಾಖಲಾಗಿದೆ.

ಫೈರೋಜ್ 5ಕ್ಕೂ ಹೆಚ್ಚು ಪ್ರಕರಣಗಳ ರೌಡಿ ಶೀಟರ್

ವೃದ್ಧ ಮಹಿಳೆಯನ್ನು ಅತ್ಯಾಚಾರ ಮಾಡಿ, ಆಕೆಯ ಬಳಿ ಇದ್ದ ಹಣವನ್ನು ದೋಚಿ ನಂತರ ಪೊಲೀಸರ ಬಂಧನ ಮಾಡುವ ವೇಳೆ ಹಲ್ಲೆ ನಡೆಸಿದ 25 ವರ್ಷದ ಆರೋಪಿ ಫೈರೋಜ ಯರಗಟ್ಟಿ ಸರಿಸುಮಾರು ಐದಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದಲ್ಲದೇ ಖತರ್ನಾಕ್ ರೌಡಿಶೀಟರ್ ಕೂಡ ಆಗಿದ್ದಾನೆ. ಕಳೆದ ಕೆಲ ವರ್ಷಗಳಲ್ಲಿ ಈತನ ಮೇಲೆ ಹೊಡೆದಾಟ, ಗಾಂಜಾ ಮಾರಾಟ , ಉತ್ತಮ ಸರಾಯಿ ಮಾರಾಟ ಸೇರಿದಂತೆ ಐದಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 2023ರ ಮಾರ್ಚ್ 23 ರಂದು ರೌಡಿಶೀಟ ಕೂಡಾ ತೆರೆಯಲಾಗಿದೆ. ಈತನಿಗೆ ಪೊಲೀಸರು ಅದೆಷ್ಟು ಬುದ್ಧಿ ಹೇಳಿದರೂ ಕೇಳಿಸಿಕೊಳ್ಳುತ್ತಿರಲಿಲ್ಲ. ಕರೆದರೂ ಬರುತ್ತಿರಲಿಲ್ಲ. ತಹಶೀಲ್ದಾರರ ಮುಂದೆಯೂ ಹಾಜರಾಗುತ್ತಿರಲಿಲ್ಲ ಎಂಬ ಆರೋಪ ಕೂಡ ಇದೆ. ಈತನ ತಂದೆ, ತಾಯಿ ಬೇರೆ ಊರಲ್ಲಿ ಇರುತ್ತಿದ್ದರು. ಇಬ್ಬರು ಸಹೋದರಿಯರಿದ್ದರೂ ಈತ ದುಡಿಯುತ್ತಿರಲಿಲ್ಲ. ಒಬ್ಬ ಸಹೋದರ ಬೇರೆ ನಗರದಲ್ಲಿ ಉದ್ಯೋಗದಲ್ಲಿದ್ದಾನೆ. ಈತ ಅಲ್ಲಿ ಇಲ್ಲಿ ಮೋಸ, ವಂಚನೆ ಮಾಡಿಕೊಂಡಿದ್ದ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಎರಡು ಕಡೆ ಬಳಸಿದ್ದು ಒಂದೇ ಚಾಕು
ಆರೋಪಿ ಫೈರೋಜ ತನ್ನ ಬಳಿ ಸದಾ ಚಾಕು ಒಂದನ್ನು ಇಟ್ಟುಕೊಳ್ಳುತ್ತಿದ್ದ. ವೃದ್ಧ ಮಹಿಳೆಯನ್ನು ಅತ್ಯಾಚಾರ ಮಾಡಿ ಆಕೆಯ ಬಳಿ ಇದ್ದ ಮೊಬೈಲ್ ಹಾಗೂ ಐದೂ ಸಾವಿರ ರೂಗಳನ್ನ ದೋಚುವ ವೇಳೆ ಆಕೆಯ ಮೇಲೆಯೂ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡುವಾಗಲೂ ಆರೋಪಿ ಅದೇ ಚಾಕುವಿನ ಬಳಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈಗ ಚಾಕು ಪೋಲಿಸರ ವರ್ಷದಲ್ಲಿದೆ.

ಮೂರು ತಂಡಗಳಲ್ಲಿ ಕಾರ್ಯಾಚರಣೆ
ವೃದ್ಧ ಮಹಿಳೆಯ ಮೇಲೆ ಅತ್ಯಾಚಾರದ ಘಟನೆ ನಡೆಯುತ್ತಿದ್ದಂತೆಯೇ ಪಚರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಾಂಡೇಲಿಯ ಡಿವೈಸ್ಪಿ ಶಿವಾನಂದ ಮದರಕಂಡಿಯವರು ಆರೋಪಿಯನ್ನ ಪತ್ತೆಹಚ್ಚಲು ದಾಂಡೇಲಿಯ ಸಿಪಿಐ ಜಯಪಾಲ್ ಪಾಟೀಲ್, ಜೋಯಿಡಾ ಸಿಪಿಐ ಚಂದ್ರಶೇಖರ್ ಹರಿಹರ, ಯಲ್ಲಾಪುರ ಸಿಪಿಐ ರಮೇಶ್ ಹರಾಪುರ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದರು. ಇವರಲ್ಲಿ ದಾಂಡೇಲಿಯ ಸಿಪಿಐ ಜಯಪಾಲ್ ತಂಡದ ನೇತೃತ್ವ ವಹಿಸಿದ್ದ ದಾಂಡೇಲಿ ಪಿಎಸ್ಐ ಕಿರಣ್ ಪಾಟೀಲ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ನೂರಕ್ಕೂ ಹೆಚ್ಚು ಜನರ ಭಾವಚಿತ್ರ
ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದ್ದಂತೆಯೇ ಮಹಿಳೆ ಅಸ್ಪೃಷ್ಟವಾದ ಮಾಹಿತಿಯನ್ನು ನೀಡಿದಾಗ ದಾಂಡೇಲಿಯಲ್ಲಿ ಹಿಂದೆ ಈ ರೀತಿಯ ಕೃತ್ಯಗಳಲ್ಲಿ ಭಾಗವಹಿಸಿದ ಕ್ರಿಮಿನಲ್ ಹಿನ್ನೆಲೆಯ ಸುಮಾರ ನೂರಕ್ಕೂ ಹೆಚ್ಚು ಜನರ ಭಾವಚಿತ್ರಗಳನ್ನು ಪೊಲೀಸರು ಮಹಿಳೆಗೆ ತೋರಿಸಿದ್ದಾರೆ. ಇವರಲ್ಲಿ ಯಾರಾದರೂ ಇದ್ದಾರೆಯೇ ಎಂದು ಕೇಳಿದ್ದಾರೆ. ಆ ಸಂದರ್ಭದಲ್ಲಿ ಮಹಿಳೆ ಫೈರೋಜ ಯರಗಟ್ಟಿಯನ್ನು ತೋರಿಸಿ ಈತನೇ ಅತ್ಯಾಚಾರ ಮಾಡಿದ್ದು ಎಂದು ಹೇಳಿದ್ದಳೆನ್ನಲಾಗಿದೆ.

ಚಾಣಾಕ್ಷ ಕ್ರೈಂ ಪಿ.ಎಸ್.ಐ. ಕಿರಣ ಪಾಟೀಲ


ಆರೋಪಿ ರೌಡೀಶೀತರ ಬಂಧನದ ವೇಳೆ ಆತನ ಕಾಲಿಗೊಂದು ಗುಂಡೆಟು ಇಟ್ಟು, ತಾನೂ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾಂಡೇಲಿಯ ಅಪರಾಧ ವಿಭಾಗದ ಕಿರಣ ಪಾಟೀಲ್ ಅವರು ಚಾಣಾಕ್ಷಮತಿಯ ಕ್ರೈಂ ಪಿ.ಎಸ್.ಐ. ಆಗಿದ್ದಾರೆ. ಯಂಗ್ ಎನರ್ಜಿಕ್ ಆಗಿರುವ ಇವರು 2016 ರ ಬ್ಯಾಚ್ ನ ಪಿ.ಎಸ್.ಐ. ಅಂಕೋಲಾ ರಾಮಗರ, ದಾಂಡೇಲಿ ಠೌನ್, ಅರಣ್ಯ ಸಂಚಾರಿದಳ, ಈಗ ದಾಂಡೇಲಿ ನಗರದ ಅಪರಾಧ ವಿಭಾಗದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಅಪರಾಧ ಪತ್ತೆಹಚ್ಚುವಲ್ಲಿ ಇವರು ನಿಪುಣರು. ಕಳೆದ ತಿಂಗಳು ನಡೆದಿದ್ದ ನಕಲಿ ನೋಟಿನ ಖದೀಮರನ್ನೂ ಅಂತರಾಜ್ಯದಿಂದ ಹೆಡೆಮುರಿ ಕಟ್ಟಿ ತಂದಿದ್ದರು. ನಿಜಕ್ಕೂ ದಾಂಡೇಲಿಯಲ್ಲಿ ಇವರೆಂದರೆ ರೌಡೀಶೀಟರ್ ಗಳಿಗೂ ಭಯ. ಕೆಲ ದಿನಗಳ ಹಿಂದಷ್ಟೆ ತಾನು ಯಾರಿಗೂ ಕ್ಯಾರ್ ಮಾಡುವುದಿಲ್ಲ ಎನ್ನುತ್ತಿದ್ದ ಇಬ್ಬರು ರೌಡಿ ಶೀಟರ್ ಗಳ ಕೊರಳಪಟ್ಟಿ ಹಿಡಿದು ಸಾರ್ವಜನಿಕರೆದುರೇ ಪೊಲಿಸ್ ವಾಹನ ಹತ್ತಿಸಿದ್ದರು. ಇದೀಗ ಮತ್ತೊಬ್ಬ ರೌಡಿ ಶೀಟರ್ ನ ಕಾಲು ಮುರಿದಿದ್ದಾರೆ. ಕಿರಣ ಪಾಟೀಲರ ಕಾರ್ಯಕ್ಕೆ ದಾಂಡೇಲಿಗರ ಮೆಚ್ಚುಗೆ ಕೇಳಿಬರುತ್ತಿದೆ.

ಎಸ್. ಪಿ. ನಾರಾಯಣ್ ಏನಂದ್ರು?

ಶೂಟೋಟ್ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದಾಂಡೇಲಿಗಾಗಮಿಸಿದ ಎಸ್.ಪಿ. ನಾರಾಯಣ ಗಾಯಗೊಂಡ ತಮ್ಮ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿ, ಘಟನೆಯ ಮಾಹಿತಿ ಪಡೆದು ‘ ನಾನಿದ್ದೀನಿ’ ಎಂಬ ನೈತಿಕ ಧೈರ್ಯ ತುಂಬಿದರು. ‘ನಮ್ಮ ಪೊಲೀಸರು ಆರೋಪಿಯನ್ನ ಬಂಧಿಸುವ ವೇಳೆ ಆತ್ಮರಕ್ಷಣೆಗಾಗಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪಿ ಶರಣಾಗತಿಯಾಗದಿದ್ದಾಗ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಅದು ಅನಿವಾರ್ಯವಾಗಿತ್ತು. ಫೈರೋಜ ಯರಗಟ್ಟಿ ಕ್ರಿಮಿನಲ್ ಹಿನ್ನಲೆಯವನು. ರೌಡಿಶೀಟರ್. ಜಿಲ್ಲೆಯಲ್ಲಿ ಯಾವುದೇ ಕ್ರಿಮಿನಲ್ ವ್ಯಕ್ತಿತ್ವದವರಿಗೆ ಆಟ ಆಡಲು ನಾವು ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿ ದಾಂಡೇಲಿ ಹಾಗೂ ಜಿಲ್ಲೆಯನ್ನು ಶಾಂತಿಯುತವಾಗಿ ಇಡಲು ಜನರ ಸಹಕಾರವು ನಮಗೆ ಬೇಕಿದೆ. ಈ ಪ್ರಕರಣದಲ್ಲಿ ದಾಂಡೇಲಿಯ ಜನ ಎಲ್ಲ ರೀತಿಯಿಂದಲೂ ಸಹಕರಿಸಿದ್ದಾರೆ. ಪೊಲೀಸರ ಕಾರ್ಯ ಕೂಡ ಮೆಚ್ಚುವಂತದ್ದಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸುದ್ದಿಗೋಷ್ಠಿ

ಹುಬ್ಬಳ್ಳಿಯ ಕಿಮ್ಸಲ್ಲಿ ಆರೋಪಿಗೆ ಚಿಕಿತ್ಸೆ

ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿ ಫೈರೋಜ ಮೇಲೆ ಕಾಲಿಗೆ ಪೊಲೀಸರ ಗುಂಡೇಟು ತಗಲಿದ್ದರಿಂದ ಆತನ ಎಡಗಾಲಿನ ಮೊಣಕಾಲ ಕೆಳಗೆ ಪೆಟ್ಟಾಗಿದೆ. ಆತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಗೆ ದಾಖಲಿಸಲಾಗಿದೆ. ಸದ್ಯ ಪೊಲೀಸ್ ಕಾವಲಲ್ಲಿ ಆರೋಪಿ ಫೈರೋಜ್ ಯರಗಟ್ಟಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತ ಗುಣಮುಖನಾದ ನಂತರ ನಿಯಮಾನುಸರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಡಿವೈಎಸ್ಪಿ ಶಿವಾನಂದ ಮದರಕಂಡಿ ತಿಳಿಸಿದ್ದಾರೆ.

ಆರೋಪಿ ಫೈರೋಜ್
About ಬಿ.ಎನ್‌. ವಾಸರೆ 628 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*