
ದಾಂಡೇಲಿ ನಗರ ಹಾಗೂ ಸುತ್ತಲ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ತಮ್ಮ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ ರಿಯಾಯತಿ ದರದಲ್ಲಿ ನೋಟ್ ಬುಕ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಶೈಕ್ಷಣಿಕ, ಸಾಮಾಜಿಕ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಸಾಕಷ್ಟು ಸೇವಾ ಕಾರ್ಯ ಮಾಡುತ್ತಿರುವ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಕಳೆದ ಹಲವು ವರ್ಷಗಳಿಂದ ದಾಂಡೇಲಿಯ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ನೋಟಬುಕ್ ನೀಡುತ್ತ ಬಂದಿದೆ. ಈ ವರ್ಷ ಕಳೆದ ಬಾರಿಗಿಂತ ದರ ಕಡಿಮೆ ಮಾಡಲಾಗಿದ್ದು, ದಾಂಡೇಲಿಯ ಸುತ್ತಮುತ್ತಲ ಸುಮಾರು 12 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ. 3.5 ಲಕ್ಷಕ್ಕೂ ಅಧಿಕ ನೋಟ್ ಬುಕ್ ಗಳನ್ನು ಕಾಗದ ಕಂಪನಿ ವಿತರಣೆ ಮಾಡುತ್ತಿದೆ. ಇದರ ಒಟ್ಟು ಮೌಲ್ಯ ಸುಮಾರು 70 ಲಕ್ಷ ರೂಪಾಯಿಗಳಷ್ಟಾಗಿದ್ದು, ಕಂಪನಿ ತನ್ನ ಕಾಗದವನ್ನೇ ಬಳಸಿ ನೋಟ್ ಬುಕ್ ಮುದ್ರಿಸಿ ರಿಯಾಯಿತಿ ದರದಲ್ಲಿ ನೀಡುತ್ತಿರುವುದರಿಂದ ಕಂಪನಿಗೆ 15 ಲಕ್ಷದ ರೂ.ಗಳಷ್ಟು ಹೆಚ್ಚುವರಿ ಖರ್ಚು ಬರುತ್ತಿದೆ ಎಂದು ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದ್ದಾರೆ.

ಈಗಾಗಲೇ ಎಲ್ಲಾ ಶಾಲೆ ಕಾಲೇಜುಗಳ ಪ್ರತಿಯೊಂದು ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಸಿಗುವ ನೋಟ ಬುಕ್ ಗಳ ಕೂಪನ್ ಗಳನ್ನ ನೀಡಲಾಗಿದೆ. ಬಂಗೂರು ನಗರ ಶಾಪಿಂಗ್ ಸೆಂಟರ್ ನಲ್ಲಿ ಈ ನೋಟ್ ಬುಕ್ ವಿತರಿಸುವ ಕಾರ್ಯ ಕೂಡ ಈಗಾಗಲೇ ಆರಂಭವಾಗಿದೆ. ಮುಂಜಾನೆ 9 ಗಂಟೆ ಯಿಂದ ಮಧ್ಯಾಹ್ನ 12, ಮಧ್ಯಾಹ್ನ 3 ಗಂಟೆಯಿಂದ ಸಂಜೆ 7ರ ವರೆಗೆ ನೋಟ್ ಬುಕ್ ವಿತರಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಸಮಯದೊಳಗಡೆ ಬಂದು ನೋಟ್ ಬುಕ್ ಪಡೆಯಬಹುದೆಂದು ಕಾಗದ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
12 ಸಾವಿರ ವಿದ್ಯಾರ್ಥಿಗಳಿಗೆ ಈ ನೋಟುಗಳನ್ನು ನೀಡಲಾಗುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ 100 ಪೇಜ್ ಹಾಗೂ 200 ಪೇಜ್ ನ ಚಿಕ್ಕ ಪಟ್ಟಿ ಹಾಗೂ 100 ಪೇಜ್ ಮತ್ತು 200 ಪೇಜ್ ನ ಕಿಂಗ್ ಸೈಜ್ ಪಟ್ಟಿಗಳು ಸೇರಿದಂತೆ ಒಟ್ಟು ನಾಲ್ಕು ಡಜನ್ ನೋಟ್ ಬುಕ್ ಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೆ ರಿಯಾಯತಿಯಲ್ಲಿ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ನೋಟ್ ಬುಕ್ ನ ದರಕ್ಕಿಂತ ಸರಿಸುಮಾರು ಅರ್ಧ ದರದಲ್ಲಿ ಕಾಗದ ಕಂಪನಿಯವರು ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ವಿತರಿಸುತ್ತಿರುವುದು ಪಾಲಕರ ಹಾಗೂ ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ.
ಸಿ.ಎಸ್.ಆರ್. ಯೋಜನೆಯಡಿ ಸೇವಾ ಕಾರ್ಯ
ಕಂಪನಿಯ ಮಾಲಕರಾದ ಬಂಗೂರ ಶೇಠ್, ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಮಾರ್ಗದರ್ಶನದಲ್ಲಿ ಕಾಗದ ಕಂಪನಿಯ ಸಿ.ಎಸ್.ಆರ್. ಯೋಜನೆಯಡಿಯಲ್ಲಿ ರಿಯಾಯತಿ ದರದಲ್ಲಿ ಈ ನೋಟಬುಕ್ ನೀಡಲಾಗುತ್ತಿದೆ. ಹಲವು ವರ್ಷಗಳಿಂದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ದರವನ್ನು ಇನ್ನೂ ಕಡಿಮೆ ಮಾಡಲಾಗಿದೆ. 12 ಸಾವಿರ ವಿದ್ಯಾರ್ಥಿಗಳಿಗೆ 3.5 ಲಕ್ಷ ನೋಟಬುಕ್ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದ್ದಾರೆ.
ವಿಡಿಯೋದಲ್ಲಿ….

Be the first to comment