ಚಾಣಾಕ್ಷ ಪೊಲೀಸ್ ಅಧಿಕಾರಿ ಕಿರಣ ಪಾಟೀಲರ ಗುಂಡಿನ ಸದ್ದಿಗೆ ನಡುಗಿದ ದಾಂಡೇಲಿಯ ರೌಡಿಶೀಟರಗಳು

ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರು ನಡೆಸಿದ ಫೈರಿಂಗ್ ಪ್ರಕರಣ ದಾಂಡೇಲಿಯ ರೌಡಿಶೀಟರಗಳ ಹಾಗೂ ಮರಿ ಪುಡಾರಿಗಳ ನಿದ್ದೆಗೆಡಿಸಿದ್ದು, ಗುಂಡಿನ ಸುದ್ದಿಗೆ ನಡುಗಿರುವ ಈ ರೌಡಿಶೀಟರ್ ಗಳು ಕಳೆದೆರಡು ದಿನಗಳಿಂದ ಮನೆ ಬಾಗಿಲು ಬಿಟ್ಟು ಹೊರಬಂದಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ ಯಾಸಿನ್ ಯರಗಟ್ಟಿಯನ್ನ ಬಂಧಿಸುವ ವೇಳೆ ಆರೋಪಿಯೇ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ದಾಂಡೇಲಿಯ ಅರಕ್ಷಕ ಉಪ ನಿರೀಕ್ಷಕ ಕಿರಣ್ ಪಾಟೀಲ್ ಆರೋಪಿಯ ಮೇಲೆ ಶೂಟ್ ಔಟ್ ಮಾಡಿ ಆತನನ್ನು ಬಂಧಿಸಿದ್ದರು. ಆರೋಪಿ ಚಾಕುವಿನಿಂದ ನಡೆಸಿದ ಹಲ್ಲೆಯಿಂದ ತಾವೂ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ದಾಂಡೇಲಿಯ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಶೂಟ್ ಔಟ್ ಪ್ರಕರಣ ನಡೆದಿತ್ತು. ಈ ಫೈರಿಂಗ್ ಪ್ರಕರಣ ಸುದ್ದಿಯಾಗುತ್ತಿದ್ದಂತೆಯೇ ಕೆಲ ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಮುಂದೆ ತಮ್ಮ ಮೇಲೆಯೂ ಹೀಗೆ ಆಗಬಹುದೇನೋ ಎಂದು ಅವರವರೇ ಆಡಿಕೊಳ್ಳುತ್ತಿದ್ದಾರಂತೆ. ಈ ಭಯಕ್ಕೆ ಕಾರಣ ಮೊನ್ನೆಯ ಪ್ರಕರಣದಲ್ಲಿ ಫೈರಿಂಗ್ ಮಾಡಿದ ಕಿರಣ್ ಪಾಟೀಲ್ ಎಂಬ ದಿಟ್ಟ ನಿಲುವಿನ ದಕ್ಷ ಪೊಲೀಸ ಅಧಿಕಾರಿ.

ದಾಂಡೇಲಿಯ ಅಪರಾಧ ವಿಭಾಗದ ಕಿರಣ ಪಾಟೀಲ್ ನಿಜಕ್ಕೂ ಒಬ್ಬ ಚಾಣಾಕ್ಷಮತಿಯ ಕ್ರೈಂ ಪಿ.ಎಸ್.ಐ. ಆಗಿದ್ದಾರೆ. ಯಂಗ್ ಎಂಡ್ ಎನರ್ಜಿಕ್ ಆಗಿರುವ ಇವರು 2016 ರ ಬ್ಯಾಚ್ ನ ಪಿ.ಎಸ್.ಐ. ಬೆಂಗಳೂರು ಹಾಗೂ ಅಂಕೋಲಾ ದಲ್ಲಿ ಪ್ರೊಭೆಷನರಿ ಸೇವೆ ಸಲ್ಲಿಸಿದ ಇವರು ರಾಮಗರ, ದಾಂಡೇಲಿ ಟೌನ್, ಅರಣ್ಯ ಸಂಚಾರಿದಳ, ಈಗ ದಾಂಡೇಲಿ ನಗರದ ಅಪರಾಧ ವಿಭಾಗದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಮನಗರದಲ್ಲಿ ನಡೆದಿದ್ದ ಹಾಫ್ ಮರ್ಡರ್ ಪ್ರಕರಣವನ್ನ ತಕ್ಷಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದರು. ದಾಂಡೇಲಿಯಲ್ಲಿ ಕಳೆದ ತಿಂಗಳು ನಡೆದಿದ್ದ ನಕಲಿ ನೋಟಿನ ಖದೀಮರನ್ನೂ ಅಂತರಾಜ್ಯದಿಂದ ಹೆಡೆಮುರಿ ಕಟ್ಟಿ ತಂದಿದ್ದರು. ಅಪರಾಧಿಗಳನ್ನು ಪತ್ತೆ ಹಚ್ಚುವುದು, ಪ್ರಕರಣ ಭೇದಿಸುವುದು ಎಂದರೆ ಇವರಿಗೆ ಚಾಲೇಂಜಿಂಗ್ ಕೆಲಸ. ನಿಜಕ್ಕೂ ದಾಂಡೇಲಿಯಲ್ಲಿ ಇವರೆಂದರೆ ರೌಡೀಶೀಟರ್ ಗಳಿಗೂ ಭಯ.

ಕೆಲ ದಿನಗಳ ಹಿಂದಷ್ಟೆ ‘ತಾನು ಯಾರಿಗೂ ಕ್ಯಾರ್ ಮಾಡುವುದಿಲ್ಲ. ಯಾವ ಪೊಲೀಸ್ ನನಗೇನು ಮಾಡುವುದಿಲ್ಲ’ ಎನ್ನುತ್ತಿದ್ದ ಇಬ್ಬರು ರೌಡಿ ಶೀಟರ್ ಗಳ ಕೊರಳಪಟ್ಟಿ ಹಿಡಿದು ಸಾರ್ವಜನಿಕರೆದುರೇ ಪೊಲಿಸ್ ವಾಹನ ಹತ್ತಿಸಿದ್ದ ಘಟನೆ ಹಳಿಯಾಳ ರಸ್ತೆಯಲ್ಲಿ ನಡೆದಿತ್ತು. ಇದೀಗ ಮತ್ತೊಬ್ಬ ರೌಡಿ ಶೀಟರ್ ನ ಕಾಲು ಮುರಿದಿದ್ದಾರೆ.

ದಾಂಡೇಲಿಯಲ್ಲಿ ಶೂಟೌಟ್ ಪ್ರಕರಣ ನಡೆದ ನಂತರದಲ್ಲಿ ಅಪರಾಧ ಹಿನ್ನೆಲೆಯ ಅನೇಕರು ಎರಡು ದಿನಗಳಿಂದ ಮನೆಯ ಹೊರಗೆ ಬಂದಿಲ್ಲವಂತೆ. ಅವರವರ ದೂರವಾಣಿಯಲ್ಲಿ ಮಾತನಾಡಿಕೊಂಡಿದ್ದಾರಂತೆ. ಅನಗತ್ಯವಾಗಿ ಕಿರಿಕ್ ಮಾಡಿಕೊಳ್ಳಬೇಡ ಎಂದು ತಾವು ತಾವೇ ಉಪದೇಶ ಹೇಳಿಕೊಂಡಿದ್ದಾರಂತೆ. ಮತ್ತೆ ಅಪರಾಧ ಪ್ರಕರಣ ದಾಖಲಾದರೆ ತಮ ಮೇಲೂ ಎಲ್ಲೋ ಗುಂಡಿನ ದಾಳಿ ನಡೆದೀತು ಎನ್ನುವ ಭಯ ಸಹಜವಾಗಿ ಅವರಿಗಂತು ಇದ್ದೇ ಇದೆ.

ಕಿರಣ ಪಾಟೀಲರ ಕಾರ್ಯಕ್ಕೆ ದಾಂಡೇಲಿಗರ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ. ಹಾಗೆ ನೋಡಿದರೆ ದಾಂಡೇಲಿಯಲ್ಲಿ ದೊಡ್ಡ ಪ್ರಮಾಣದ ಅಪರಾಧ ಪ್ರಕರಣಗಳು ಕಡಿಮೆ. ಶಾಂತಿ ಪ್ರಿಯವಾದ ಈ ನಗರದಲ್ಲಿ ಅಶಾಂತಿ ಕೆಡಿಸುವ ಕೆಲಸಗಳು ನಡೆಯದಿರಲಿ ಎಂದು ಬಯಸುವ ಪ್ರಾಜ್ಞ ನಾಗರಿಕರು ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಪೋಲಿಸ್ ಸಿಬ್ಬಂದಿಗಳಾದ ಕೃಷ್ಣಪ್ಪ ಮತ್ತು ಇಮ್ರಾನ್ ಅವರ ಸಕಾಲಿಕವಾದ ಸಾಹಸವನ್ನು ಶ್ಲಾಗಿಸುತ್ತಿದ್ದಾರೆ. ಅದಕ್ಕೆ ಕಿರಣ ಪಾಟೀಲ ಹಾಗೂ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅವರನ್ನು ನೋಡಲೆಂದು ಬಂದ ಜನಸಾಗರವೇ ಒಂದು ನಿದರ್ಶನವಾಗಿದೆ. ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಕೂಡಾ ಇವರ ಕಾರ್ಯಕ್ಕೆ ಅಭಿನಂದಿಸಿದ್ದಾರೆ.

About ಬಿ.ಎನ್‌. ವಾಸರೆ 628 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*