ಸಮಾಜ ಸೇವೆಗೆ ಮತ್ತೊಂದು ಹೆಸರು ಅಗ್ರಹಾರದ ಸಭಾಹಿತ ಕುಟುಂಬ

ಲಾಭಕ್ಕಿಂತಲೂ ಕರ್ತವ್ಯ ಮುಖ್ಯ,  ಜಯಕ್ಕಿಂತಲೂ ಸಾಧನೆ ಮುಖ್ಯ, ಫಲಕ್ಕಿಂತಲೂ ಶ್ರಮಿಸುವುದು ಮುಖ್ಯ,  ಮಾತಿಗಿಂತಲೂ ಕೃತಿ ಮುಖ್ಯ,  ಎಂಬ ವೇದದ ಈ ಸಾಲುಗಳನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿಕೊಡು ಬಂದವರು ಸಭಾಹಿತರು…

ಡಾ ಜಿ.ಜಿ. ಸಭಾಹಿತ…..

ಗಣಪತಿಗೆ ಗಣಪತಿಯೇ  ಸಾಟಿ. ನಾಮ ಬಲದ ಮೂಲಕ ಹೆಮ್ಮೆಪಡುವ ಅಪರೂಪದ ವ್ಯಕ್ತಿತ್ವ ಹೊಂದಿದವರು ಅಗ್ರಹಾರದ ಡಾ| ಜಿ.ಎನ್,ಸಭಾಹಿತರು. ಅವರ ಮಗ ಗಣಪತಿ ಗಣಪತಿ ಸಭಾಹಿತ.  ಈ ಹೆಸರು ತಂದೆಯಿಂದ ಬಳುವಳಿಯಾಗಿ ಬಂದಿರುವುದು. ಅದನ್ನು ಚಾಚು ತಪ್ಪದೆ ಪಾಲಿಸಿದವರು ನಮ್ಮ ಗಣಪತಿ ಸಭಾಹಿತರು. ಅವರೀಗ ಡಾ|.ಜಿ.ಜಿ ಸಭಾಹಿತ ಈ ಹೆಸರು ಹಳದೀಪುರ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಮಕ್ಕಳ ನಾಲಿಗೆಯ ಮೇಲೆ ನಲಿದಾಡುವ ಹೆಸರು. ಯಾಕೆಂದರೆ ಇಡೀ  ಸಮುದಾಯದ ಆಸ್ತಿ.

 ನಾವು ನಮ್ಮಇತಿಹಾಸವನ್ನು ನಮ್ಮ ಸುತ್ತಮುತ್ತಲಿನ ಪರಿಸರದಿಂದಲೇ ಅನುಭವಿಸಬೇಕು.ಅವರ ಆದರ್ಶ ಬದುಕು ನಮಗೆಲ್ಲ ದಾರಿದೀಪ. ನಮ್ಮ ಕಷ್ಟ ಸುಖಕ್ಕೆ ಸ್ಪಂದಿಸುವವರು ಇವರೇತಾನೆ. ನಮ್ಮ ಹಳದೀಪುರ ಕ್ಲಸ್ಟರ್‍ವ್ಯಾಪ್ತಿಯ ಶಾಲೆಯಲ್ಲಿರುವ ಮಕ್ಕಳ ಬಗ್ಗೆ, ಸಮಾಜದ ವಿವಿಧ ಸ್ಥರದಜನರ ಬಗ್ಗೆ ಕಾಳಜಿಯುಳ್ಳ ಅಪರೂಪದ ವ್ಯಕ್ತಿತ್ವ ಡಾಗಣಪತಿ ಸಭಾಹಿತರವರು. ಡಾ|ಜಿ.ಜಿ. ಸಭಾಹಿತ ಎಂದೇ ನಾಡಿನತುಂಬೆಲ್ಲ ಪರಿಚಿತರು. ಸಭಾಹಿತರ ಬಗ್ಗೆ ತಿಳಿಯುವುದೆಂದರೆ ಶತಮಾನದ ಹಿಂದಿನ ಸಜ್ಜನ ಭಾರತೀಯ ಪರಂಪರೆಯನ್ನು ಅರಿತಂತೆ. ಇಂತಹ ಪರಂಪರೆ ನಮ್ಮ ಮಕ್ಕಳಿಗೆ ತಿಳಿಸಬೇಕಾಗಿದೆ. ಆ ಮಕ್ಕಳು ಸುತ್ತಲ ಪರಿಸರವನ್ನು ಅವಲೋಕಿಸಿ ಸಂಭ್ರಮಿಸಬೇಕಾಗಿದೆ. ಈಕಾರಣಕ್ಕಾಗಿಯೇ ಸಭಾಹಿತರು  ನಮ್ಮ ಸಂಸ್ಕೃತಿಯ  ಆಸ್ತಿ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಹಳದೀಪುರ ಗ್ರಾಮಕ್ಕೆ ಸಂಬಂದಿಸಿದ ಪುಟ್ಟ ಮಜರೆ ಅಗ್ರಹಾರ. ಈ ಮಜರೆಯಲ್ಲಿ ಜನಿಸಿದ ಗಣಪತಿ ಸಭಾಹಿತ ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಸದ್ಗುಣ ಸಂಪನ್ನರಾಗಿ, ವೈದ್ಯರಾಗಿ, ವೈದ್ಯೋ ನಾರಾಯಣೋ ಹರಿ ಎಂಬ ಮಾತನ್ನು ಸಾರ್ಥಕಪಡಿಸಿದ ಡಾ ಜಿ.ಎನ್.ಸಭಾಹಿತರ ಹಿರಿಯ ಮಗನೇ ಡಾ|ಜಿ.ಜಿ. ಸಭಾಹಿತರು. ತಂದೆ ತೋರಿಸಿದ ಮಾರ್ಗದಲ್ಲೆ ಮುನ್ನಡೆದು ಸಭಾಹಿತ ಕುಟುಂಬಕ್ಕೆಆದರ್ಶಪ್ರಾಯರಾಗಿ ಪರಿಚಿತರಾಗಿರುತ್ತಾರೆ. ಸಭಾಹಿತ ಎಂದರೆಸಾಮೂಹಿಕ ಹಿತ ಬಯಸುವವನು. ಎಲ್ಲರ ವ್ಯವಸ್ಥೆ ನೋಡಿಕೊಳ್ಳುವವ ಎಂಬುದು ಸಾಮಾನ್ಯಅರ್ಥವಾಗಿದೆ. ಅಂದರೆ ಸಭಾಹಿತ ಎಂಬುದುಒಂದು ನಿರ್ದಿಷ್ಟ ಹೊಣೆಗಾರಿಕೆಯ ಹುದ್ದೆ ಎಂಬುವುದನ್ನು ತೋರಿಸುತ್ತದೆ.  ಕೆಳದಿಯ ಬಸವರಾಜನ ಆಡಳಿತಾವಧಿಯಲ್ಲಿ ಹಳದೀಪುರದ ಅಗ್ರಹಾರವನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಆಡಳಿತ ನಡೆಸುತ್ತಾ ಬಂದದ್ದು ಸಭಾಹಿತ ಮನೆತನ.

ಇಂತಹ ಚಾರಿತ್ರಿಕ ಹಿನ್ನೆಲೆಯುಳ್ಳ ಆದರ್ಶ,ಅನುಕರಣೀಯ ಕುಟುಂಬದಲ್ಲಿ ಡಾ|ಗಣಪತಿ ಸಭಾಹಿತ ಜನಿಸಿದ್ದು ಮಾರ್ಚ 28, 1950.ತಂದೆ ಹೆಸರನ್ನು ಬಳುವಳಿಯಾಗಿ ಪಡೆದು ಆ ಹೆಸರಿನ ಹಿಂದೆ ಇರುವ ಅಂತರ್ ಶಕ್ತಿಯನ್ನು ಉದ್ದೀಪಿಸಿ ಆದರ್ಶ ಬದುಕಿನ ನಡೆಯಲ್ಲಿಒಂದೊಂದೆ ಹೆಜ್ಜೆಯನ್ನಿಟ್ಟು ಮುನ್ನಡೆಯುತ್ತ ಇಡೀ ಸಮಾಜಕ್ಕೆ ಮಾದರಿಯಾದ ಡಾ| ಗಣಪತಿ ಸಭಾಹಿತರ ತಾಯಿ ಲೀಲಾವತಿ. ಲೀಲಾ ಗಣಪತಿ ಚ್ಯಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ತಂದೆ-ತಾಯಿಯವರ ಹೆಸರನ್ನು ಟ್ರಸ್ಟಿನ ಮೂಲಕ ಶಾಶ್ವತವಾಗಿ ನೆಲೆನಿಲ್ಲುವಂತೆ ಆಮೂಲಕ ಅವರ ಆಶೆಯನ್ನು ಈಡೇರಿಸುವ ಸಾತ್ವಿಕ ಉದ್ದೇಶಗಳನ್ನು ಹೊಂದಿ ಅನುಷ್ಟಾನಗೊಳ್ಳುತ್ತಿದೆ. ಇದಕ್ಕೆಲ್ಲ ನಮ್ಮ ಪೂಜ್ಯ ಗಣಪತಿ ಸಭಾಹಿತರೇ ಕಾರಣರು.


 ಇಡಗುಂಜಿ ಮತ್ತು ಸ್ವರ್ಣವಲ್ಲಿ ಮಠಕ್ಕಿರುವ ಸಂಬಂಧ ತಿಳಿಸುವ ತಾಳೆಗರಿ ಲಿಫಿ

ಅವರ ಬಾಲ್ಯದ ಶಿಕ್ಷಣವು ಹುಟ್ಟೂರಿನಲ್ಲಿಯೇ ನಡೆಯಿತು. ಹಳದೀಪುರದ ನೇಮಿ ಮಿಷನ್ ಸ್ಕೂಲ್‍ ಅಂದರೆ ಎನ್.ಎಮ್.ಎಸ್ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಕಲಿತು ಪ್ರೌಢ ಶಿಕ್ಷಣವನ್ನು ಮನೆ ಬಾಗಿಲಲ್ಲಿ ತಂದೆಯವರೇ ಸಂಸ್ಥಾಪಕರಾಗಿ ನಡೆಸುತ್ತಿದ್ದಆರ್.ಇ.ಎಸ್‍ ಅಂದರೆ ರೂರಲ್‍ ಎಜ್ಯುಕೇಶನ್ ಸೊಸೈಟಿಯಲ್ಲಿ ಪೂರೈಸಿದರು. ಕುಂದಾಪುರದ ಬಂಡಾರ್ಸಕರ್‍ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿ 1970 ರಲ್ಲಿ ಬೆಳಗಾಂವ ಆಯುರ್ವೇದಿಕಕಾಲೇಜಿನಲ್ಲಿ ಡಿಪ್ಲೋಮಾ ಇನ್‍ಆಯುರ್ವೇದಿಕ ಶಿಕ್ಷಣ ಪಡೆದು ಎರಡುವರ್ಷಗಳ ಕಾಲ ಬೆಳಗಾಂವ ನರ್ಸಿಂಗ್ ಹೋಮ್‍ನಲ್ಲಿ ಸೇವೆಯನ್ನು ಆರಂಭಿಸಿದರು. ನಂತರ ತಂದೆಯ ಪ್ರಭಾವಕ್ಕೊಳಗಾಗಿ ಹಾಗೂ ಊರಜನರ ಸೇವೆಗಾಗಿ ದೂರದ ಬೆಳಗಾಂವನಿಂದ ಅಗ್ರಹಾರಕ್ಕೆ ಬಂದು1978ರಲ್ಲಿ ಕ್ಲಿನಿಕ್‍ತೆರೆದು ಹಗಲಿರುಳೆನ್ನದೆ ಹಳದೀಪುರದ ಸುತ್ತಮುತ್ತಎಲ್ಲೇಕರೆದರು ಸೈಕಲ್ನಲ್ಲಿ ಬಂದುಆರೋಗ್ಯಕಾಪಾಡುತ್ತಿದ್ದರು. ಆ ಮೂಲಕ ಅನೇಕ ರೋಗಿಗಳ ಪಾಲಿನ ಧನ್ವಂತರಿಯೇ ಆಗಿದ್ದರು.


ಜಿ.ಜಿ. ಸಭಾಹಿತರ ಮನೆಯಲ್ಲಿರುವ  ತಾಳೆಗರಿ ಕಡತಗಳು

ತಂದೆಯಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಡಾ| ಗಣಪತಿ ಸಭಾಹಿತರ ಮನೆಯಲ್ಲಿ ತಾಳೆಗರಿಯ ದೊಡ್ಡ ದಾಖಲೆಗಳಿವೆ. ಧರ್ಮಗ್ರಂಥಗಳು, ಪುರಾಣ, ರಾಮಾಯಣ, ಮಹಾಭಾರತದ ಪುಸ್ತಕಗಳು ಹೀಗೆ ದೊಡ್ಡ ವಾಚನಾಲಯವೇ ಇದೆ. ಬಿಡುವು ಸಿಕ್ಕಾಗ ಓದುವುದುಇವರ ಹವ್ಯಾಸವಾಗಿದೆ. ಸದಾ ಪರರಿಗಾಗಿ, ದೀನದಲಿತರಿಗಾಗಿ, ಅಸಹಾಯಕರಿಗಾಗಿ, ನಿರ್ಗತಿಕರಿಗಾಗಿ ದುಡಿಯುವ ಹೃದಯ ವೈಶಾಲ್ಯತೆ ಹೊಂದಿದ ಇವರು 1986ರಲ್ಲಿ ಉತ್ತರಕನ್ನಡ ಜಿಲ್ಲಾ ಪಂಚಾಯತಿಯ ಸದಸ್ಯರಾಗಿ ಆರೋಗ್ಯ ಮತ್ತು ಶಿಕ್ಷಣಸ್ಥಾಯಿ ಸಮಿತಿಯನ್ನುಮುನ್ನಡೆಸಿದ ಜನಪ್ರತಿನಿಧಿಗಳು. ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾಗಿ ಸುಮಾರು 10 ವರ್ಷಗಳ ಕಾಲ, ಪಿ.ಎಲ್,ಡಿ ಬ್ಯಾಂಕ್‍ಅಧ್ಯಕ್ಷರಾಗಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರಾಗಿ, ಮಾರ್ಕೆಟಿಂಗ್ ಸೊಸೈಟಿಯ ನಾಮನಿರ್ದೇಶಿತ ಸದಸ್ಯರಾಗಿಯೂ ಜನಮನ್ನಣೆಗಳಿಸಿರುತ್ತಾರೆ.

ಅಗ್ರಹಾರದ ಸಭಾಹಿತ ಮನೆತನಕ್ಕೆಇಡಗುಂಜಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತಾತ್ಮಕ ಹೊಣೆಗಾರಿಕೆಯೂ ಇತ್ತು.ದೇವಸ್ಥಾನದ ಸಂಪೂರ್ಣಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳಿಗಾಗಿ ಸದಾ ಶ್ರಮಿಸುವ ಸಭಾಹಿತ ಕುಟುಂಬದವರು  ನಡೆಸುವ ಜವಾಬ್ದಾರಿಯನ್ನು 2009 ರಲ್ಲಿಡಾ|ಗಣಪತಿ ಸಭಾಹಿತರ ಹೆಗಲಿಗೇರಿತು. ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರಾಗಿ ಹಗಲಿರುಳು  ದುಡಿದುದೇವರ ಕೃಪೆಗೆ ಪಾತ್ರರಾದರು. ವೇದ ಪಾಠಶಾಲೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರು. ದೇವಸ್ಥಾನದ ಸಂಪೂರ್ಣಜವಾಬ್ದಾರಿ ನಿಭಾಯಿಸುವ ಅತ್ಯುತ್ತಮ ಸಂಘಟಕರು ಕೂಡಾ ಆಗಿದ್ದಾರೆ.

“ಮಾನವ ಜನ್ಮ ದೊಡ್ಡದು ಅದು ಹಾಳು ಮಾಡಲು ಬೇಡಿ”ಎಂದುಹಾಡಿದ ಪುರಂದರದಾಸರ ಹಾಡಿನ ಸಾಲುಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿ ಛಲದಿಂದ ವೈದ್ಯಕೀಯ ಕಲಿತು ಗ್ರಾಮೀಣ ಸೇವೆ ಮಾಡಿ ಜನಾನುರಾಗಿಯಾಗಿರುತ್ತಾರೆ. ಹೆಂಡತಿ  ಶ್ರೀಮತಿ ರಾಧಾರವರುಇವರ ಎಲ್ಲಾ ಕಾರ್ಯಗಳಿಗೂ ಪೂರಕವಾಗಿರುತ್ತಾರೆ. ಆನಂದ ಪೂರ್ಣ ಮನೆ. ಓರ್ವ ಪುತ್ರ ಗಣಪತಿ ಸಭಾಹಿತ ಇವರೂ ಸಹ ತಂದೆಯ ಹೆಸರನ್ನೇ ಬಳುವಳಿಯಾಗಿ ಪಡೆದಿರುತ್ತಾರೆ. ಮನೆಯ  ಅಂಗಳದಲ್ಲಿಯೇ ಸಮೃದ್ಧಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ಇದೇ ಅಂಗಳದಲ್ಲಿ ಪ್ರತೀ ವರ್ಷ ಅಗ್ರಹಾರದ ಜಾತ್ರೆ ಸಭಾಹಿತರ ಮುಖಂಡತ್ವದಲ್ಲಿಯೇ ನಡೆಯುತ್ತದೆ.

 ಬದುಕಿನ ಮಾರ್ಗದರ್ಶಿ ಸೂತ್ರವನ್ನು ತಂದೆಯವರಿಂದಲೇ ಕಲಿತ ಡಾ| ಜಿ.ಜಿ. ಸಭಾಹಿತರು ಕೌಟುಂಬಿಕವಾಗಿಯೂ ಸಂತ್ರಪ್ತ ಜೀವನ ಸಾಗಿಸುತ್ತಿದ್ದಾರೆ. ಸರಳ ಸಜ್ಜನಿಕೆಯ ಮೂಲಕ ನಿಸ್ವಾರ್ಥ ಸೇವೆಸಲ್ಲಿಸಿ ತನ್ನನ್ನು ತಾನು ಅರ್ಪಿಸಿಕೊಂಡ ಮಹಾನ್ ವ್ಯಕ್ತಿಗಳಾಗಿ ಸಮಾಜದ ಅನಘ್ರ್ಯ ರತ್ನಗಳಾಗಿರುತ್ತಾರೆ. ಅವರ ವೈಚಾರಿಕ ನೆಲೆಗಟ್ಟು ಉದಾತ್ತ ನಿಲುವು. ಆಚಾರ ವಿಚಾರ, ಹೃದಯ ವೈಶಾಲ್ಯತೆ, ಸಾಮಾಜಿಕ ಕಳಕಳಿ, ಧಾರ್ಮಿಕ ಪ್ರಜ್ಞೆ ಹೀಗೆ ಹತ್ತಾರು ವಿಷಯಗಳಲ್ಲಿ ಬಹು ಎತ್ತರದ ವ್ಯಕ್ತಿತ್ವದವರಾದ ಡಾ| ಗಣಪತಿ ಸಭಾಹಿತರ ಬದುಕು ನಮಗೆಲ್ಲ ಮಾದರಿಯಾಗಿದೆ. ನಮ್ಮ ಹಳದೀಪುರ ಕ್ಲಸ್ಟರ್ ವ್ಯಾಪ್ತಿಯಲ್ಲಿ ಇಂತಹ ಒಬ್ಬ ಮಹಾನ್ ವ್ಯಕ್ತಿಗಳಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಅವರನ್ನುಕಣ್ತುಂಬ ನೋಡಿ ಅವರ ಕುರಿತಾದ ಪರಿಚಯಾತ್ಮಕ  ನಾಲ್ಕು ಮಾತುಗಳನ್ನಾಡಿ ಅವರನ್ನು ಗೌರವಿಸಿ ನಮ್ಮ ಮನಸ್ಸಿನಲ್ಲಿ ಅವರ ನೆನೆಪು ಸದಾ ಹಸಿರಾಗಿರುವಂತೆ ಮಾಡಿರುವಕಾರ್ಯಕ್ರಮ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಹುಣ್ಣಿಮೆಯ ಚಂದ್ರನಂತೆ ಸದಾ ಬೆಳಗಲೆಂಬುದೆ ನಮ್ಮೆಲ್ಲರ ಹಾರೈಕೆಯಾಗಿದೆ.

–ಪಿ.ಆರ್.ನಾಯ್ಕ, ಹೊಳೆಗದ್ದೆ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*