ಅಸಾಮಾನ್ಯನಾಗುವುದು ಸುಲಭವೇ…?

ಗಾಂಧೀ ಜಯಂತಿ ಪ್ರಯುಕ್ತ ಶಿವಲೀಲಾ ಹುಣಸಗಿಯವರ ಲೇಖನ

“ರಘುಪತಿ ರಾಘವ ರಾಜಾರಾಮ್ ಪತಿತಪಾವನ ಸೀತಾರಾಮ್” ………ಎಂಬ ಆಧ್ಯಾತ್ಮಿಕ ಮನಸೂರೆಗೊಳ್ಳುವ ಪ್ರಾರ್ಥನೆಯು ದುರ್ಬಲ ಮನಸ್ಸುಗಳನ್ನು ಸಬಲಗೊಳಿ ಸುವ ಆತ್ಮಶಕ್ತಿಯ ಉತ್ಪಾದನಾ ಕೇಂದ್ರಗಳು.‌ ಸಾಬರಮತಿ ಆಶ್ರಮ ಗಾಂಧೀಜಿಯವರಿಗೆ ಆತ್ಮ ಸ್ಥೈರ್ಯ ಬೆಳಗುವ ಸ್ವರ್ಗದಂತೆ. ನೈತಿಕ ಸದೃಢತೆಯನ್ನು ನೀಡಿದ ತಾಣವದು. ಜಗತ್ತಿಗೆ ಮೂಲ ಶಿಕ್ಷಣ ನೀಡಲು ಮುನ್ನುಡಿ ಬರೆದುದು. ಅಂತಹ ಸೂಕ್ಷ್ಮ ಭಾವವನ್ನು ಬಲ್ಲ ಮನಸ್ಸುಗಳ ಸಂಗಮವದು. ಅದರ ಮೂಲ ಸ್ವರೂಪವೇ ಸರಳತೆ. ಮಾನವೀಯ ಸಂಬಂಧದ ಬುನಾದಿ. ಇದು ಲಭಿಸಿರುವುದು ಕೇವಲ ಸರಳತೆಯಿಂದ.ಹಾಗಾದರೆ ಸರಳವಾಗಿ ಬದುಕುವುದು ಎಂದರೆ ಹೇಗೆ ಎಂಬ ಪ್ರಶ್ನೆ ಸುಲಭವಲ್ಲ.

ಆಧುನಿಕತೆಯಲ್ಲಿ ಬೆಳೆದ ಜನತೆಗೆ ಗಾಂಧೀಜಿ ಒಂದು ಸವಾಲಾಗಿ ನಿಲ್ಲುತ್ತಾರೆ. ಕಂಡು ಕಾಣದಂತೆ ಬದುಕುವ ಜಗತ್ತಿಗೆ ಸರಳವಾಗಿಯು ಬದುಕ ಬಹುದೆಂದು ತೋರಿಸಿ ಕೊಟ್ಟು ಅದರಂತೆ ನಡೆದ ಮಹಾನುಭಾವ. ಅಷ್ಟು ಸುಲಭ ವಾಗಿ ಸರಳತೆಯನ್ನು ಅಪ್ಪುವ ಮನಸ್ಥಿತಿ ಯಾರದ್ದು ಇಲ್ಲ. ಐಶಾರಾಮಿ ಜೀವನ ಬಿಟ್ಟು,ಕೈಗಳಿಗೆ ಮಣ್ಣು ತಾಗಿದರೆ ರಾಡಿ ಆಯಿತೆಂದು, ಎ.ಸಿ ರೂಮ ಇಲ್ಲದಿದ್ದರೆ ಬದುಕುವುದು ಕಷ್ಟವೆಂದು, ದೇಶ ಸುಧಾರಿಸದಿದ್ದರು ಈ ದೇಶದ ಋಣವ ತೀರಿಸದೇ ವಿದೇಶಕ್ಕೆ ಹೋಗಿ ಅಲ್ಲಿ ನಿಷ್ಠೆ ತೋರಿ ದುಡಿದು ಆ ದೇಶದ ಅಭಿವೃದ್ಧಿ ಮಾಡುವ ವಿದ್ಯಾ ವಂತರಿಗೇನು ಕೊರತೆಯಿಲ್ಲ. ಬಂದಷ್ಟು ಬಾಚುವ, ಸ್ವಾರ್ಥ ಮನೋಭಾವದವರ ನಡುವೆ ಬದುಕುವುದು ಸಂಘರ್ಷಕ್ಕೆ ಸಮ. ಈ ಸನ್ನಿವೇಶವನ್ನು ಬಳಸಿಕೊಂಡು ಮೇಲೆದ್ದವರ ಬಗ್ಗೆ ಯೋಚಿಸುವಾಗಲೇ..

ವಿದೇಶಿಗರು ವ್ಯಾಪಾರ ವಹಿವಾಟುಗಳಿಗಾಗಿ ಕಳ್ಳ ದಾರಿಯಲಿ ನುಸುಳಲು ಪೂರ್ವ ಸಿದ್ದತೆಯೊಂದಿಗೆ ಅಡಿ ಇಟ್ಟ ಸತ್ಯ. ಭಾರತೀಯರ ಮನಸ್ಸನ್ನು ಅರಿತು ಹೊಂಚುಹಾಕಿ ನಮ್ಮನ್ನು ಸೆರೆಹಿಡಿದವರು. ಅವರು ನುಸುಳಿದಾಗಲೇ ಹೆಡೆಮುರಿ ಕಟ್ಟಿ ಅಂದೇ ಓಡಿಸಿದ್ದರೆ ಇಂದು ನರಳುವ ಸ್ಥಿತಿ ಬರುತ್ತಿರಲಿಲ್ಲ ಎಂಬ ಸತ್ಯ ಗೋಚರಿಸಲು ಬಹಳ ವರ್ಷ ಗಳೇ ಬೇಕಾದವು. ಆದರೆ ಏನು ಪ್ರಯೋಜನ. ಅವರ ಬಣ್ಣದ ಮಾತುಗಳಿಗೆ, ಅವರು ನೀಡುವ ಆಸೆ ಆಮಿಷಗಳಿ ಗೆ ಶರಣಾಗಿ ನಮ್ಮ ಅವನತಿಯನ್ನು ಬರಮಾಡಿಕೊಂಡಿದ್ ಕ್ಕೆ ಇತಿಹಾಸ ಸಾಕ್ಷಿಯಿದೆ. ನಮ್ಮಲಿರುವ ಅಸೂಯ, ದ್ವೇಷ ಮೋಸ, ವಂಚನೆ, ಚಾಡಿಹೇಳುವ ದುಷ್ಟ ಮನೋಭಾವವು ಬಿಳಿಯರಿಗೆ ವರದಾನವಾಗುವಂತೆ ಮಾಡಿದ್ದು ನಾವುಗಳು. ರಾಜಗದ್ದುಗೆಯ ವ್ಯಾಮೋಹ ಸ್ವದೇಶದಲ್ಲಿ ಮುಂದೊಂದು ದಿನ ನಾವು ಅತಂತ್ರರಾಗುತ್ತೆವೆಂಬ ಸ್ವಪ್ನವು ಬೀಳದಂತಹ ನಶೆಯಲಿ ಮುಳುಗಿದ ಮಹಾತ್ಮರು ನಾವುಗಳೆಂದರೆ ತಪ್ಪಾಗದು.

ತನ್ನ ಅಸ್ಥಿತ್ವವನ್ನು ಕಳೆದುಕೊಂಡು ಬಲಿಪೀಠದ ಬಲಿಪಶು ಗಳಾಗಿ, ಜೀತದಾಳುಗಳಾಗಿ ರಕ್ತ ಹೀರುವ ಆಂಗ್ಲರಿಗೆ ಆಹಾ ರವಾದದ್ದು ನಮ್ಮ ಆತ್ಮಬಲದ ಕೊರತೆಯಿಂದ. ಆಂಗ್ಲರ ಪಾಲಿಗೆ ಭಾರತವೆನ್ನುವ ಸ್ವರ್ಗವನ್ನು ಕೊಳ್ಳೆಹೊಡೆ ಯಲು ಸ್ವತಃ ದ್ವಾರ ತೆರೆದು ಕೊಟ್ಟ ಭೂಪರು. ಹಂತಹಂತ ವಾಗಿ ನಶೆಯ ಅಮಲು ಇಳಿದಂತೆ ಪ್ರತಿಭಟಿಸುವ ಸಾಮರ್ಥ್ಯ ಜಾಗೃತವಾದರೂ ಹೇಳ ಹೆಸರಿಲ್ಲದೆ ಸತ್ತವರ ಶವ ಕಂಡು ಬದುಕಿದವರೂ ಸತ್ತಂತಾಗಿದ್ದು, ವಿಚಿತ್ರವಾದರೂ ಒಪ್ಪಲೇ ಬೇಕಾದ ಸತ್ಯವದು.

ಅನ್ಯಾಯದ ವಿರುದ್ಧ ಧ್ವನಿಯೆತ್ತಿದವರು ಹಗಲುವೇಷ ಧರಿಸಿ ಅಲೆಯುವಂತಾಗಿ, ಎದೆಸೆಟಿಸಿ ಮುನ್ನುಗ್ಗಿದವರು ಬಂದೂಕಿನ ಗುಂಡಿಗೆ ಬಲಿಯಾದ ಸುದ್ದಿ ಒಂದು ಕ್ಷಣ ಹೃದಯ ತಲ್ಲಣಗೊಳಿಸಿದರು. ಅನ್ಯಾಯದ ವಿರುದ್ಧ ಮಾ ತು ಆಡದೆ ಅವರು ಹೇಳಿದಂತೆ ಕೇಳಿಕೊಂಡು, ಅವರು ಬಿಸಾಕುವ ಬ್ರೆಡ್ ಗೆ ಆಸೆ ಪಡುವ ಸಾಚಾ ವ್ಯಕ್ತಿಗಳಾಗಿ, ಆಂಗ್ಲರ ಗೂಢಚಾರರಾಗಿ ಪರಿವರ್ತನೆಯಾದವರ ಸಂಖ್ಯೆಗೆ ಕಡಿಮೆಯೆನಲ್ಲ. ಬೆರಳೆ‌ನಿಕೆಯಷ್ಟು ದೇಶಪ್ರೇಮಿಗಳು ಕ್ರಾಂತಿಯ ಕಿಡಿ ಹತ್ತಿಸುತ್ತಿದ್ದರೆ ಸಹಕರಿಸುವ ಚಿಟಕಿ ದೇಶ ಭಕ್ತರಿಗೇನು ಬರವಿಲ್ಲವೆನ್ನುವುದೇ ಸಂಭ್ರಮ ಪಡುವ ಸಂಗತಿ. ಸ್ವಾಭಿಮಾನದ ಕಿಡಿ ಹತ್ತಿಉರಿಯಲು ನೂರು ವರ್ಷದ ಗಡಿದಾಟಿದರೂ ಮುಕ್ತಿ ಸಿಗದೇ ಅನಾಯಾಸವಾಗಿ ಆಹುತಿಯಾದ ವೀರಯೋಧರ ನೆನೆದು ಅಲ್ಲಲ್ಲಿ ಸಿಡಿಲ ಮರಿಗಳು ಸಿಡಿದು ನಮ್ಮೊಳಗಿನ ದೇಶ ಪ್ರೇಮ ಬಿತ್ತುವಲ್ಲಿ ಹರಸಾಹಸ ಪಡಬೇಕಾಗಿದ್ದು ಆತಂಕವೇ

ದೇಶದ ಸಿರಿಸಂಪತ್ತನ್ನು ಧಾರಾಳವಾಗಿ ಬರಿದು ಮಾಡಲು ಆಂಗ್ಲರೇನು ಹಿಂದೇಟು ಹಾಕಿರಲಿಲ್ಲ…. ಒಡೆದಾಳುವ ವಿಷ ಬೀಜವ ಬಿತ್ತಿ ಫಲ ಪಡೆವ ಹೊತ್ತಿಗೆ ಇಡೀ ಭಾರತದ ಉದ್ದಗಲಕ್ಕೂ ಆಂಗ್ಲರ ರೈಲುಗಳು ಓಡಾಡುತ್ತಿದ್ದವು. ಅಭಿವೃದ್ಧಿಯ ಹೆಸರಲ್ಲಿ ಅನ್ಯಾಯಗಳು ಯಥೇಚ್ಛವಾಗಿ ಆಕ್ರಮಿಸುತ್ತಿದ್ದು ಹೋರಾಟದ ದಿಕ್ಕನ್ನು ಕಂಗೆಡಿಸುತ್ತಿದ್ದ ಸನ್ನಿವೇಶದಲ್ಲಿ.

ಹಿಂಸೆ, ಅಹಿಂಸೆ ಗಳ ಮಾರ್ಗವನ್ನು ಅನುಸರಿಸಿ ದೇಶದ ಸ್ವಾತಂತ್ರ್ಯದ ಕಿಚ್ಚು ಕುಡಿಯೊಡೆದು ತಮ್ಮ ಸಂಘಟನೆಯ ಬಲಗೊಳಿಸುವ ಕಾರ್ಯವನ್ನು ಎಗ್ಗಿಲ್ಲದೇ ನಡೆಸಿದವರು ಚುಕ್ಕಾಣಿಯ ದಿಕ್ಕು ಬೇರೆ ಬೇರೆ.ಆದರೆ ಗಾಂಧಿಯವರ ಸಂಕಲ್ಪ ರಕ್ತ ಪಾತವಾಗದೇ ಅಹಿಂಸೆಯಿಂದ ಸ್ವಾತಂತ್ರ್ಯ ಸಿಗಬೇಕೆಂಬುದು ಮಹಾತ್ಮ ಗಾಂಧೀಜಿಯವರ ಮನಸ್ಥಿತಿ ಯ ಅರಿವು ಸಕಲ ಭಾರತೀಯನಿಗೂ ಗೊತ್ತಿರುವಂತಹು ದು.

ಗಾಂಧಿಯ ದೂರದೃಷ್ಟಿಯಲ್ಲಿ ಕಂಡುಕೊಂಡ ನಿಜಾಂಶಗಳು.
೧) ಶಿಕ್ಷಣದ ಅವಶ್ಯಕತೆ.
೨) ಮೂಲ ಕಸುಬುಗಳಿಗೆ ಆದ್ಯತೆ.
೩) ದೇಶ ಭಕ್ತಿಯ ಜಾಗೃತಿ .
೪) ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ.
೫) ದೇಶದ ಸಂಪತ್ತಿನ ಸಂರಕ್ಷಣೆ ಹೊಣೆ ನಮ್ಮದು.
೬) ಸ್ವದೇಶಿ ಚಳುವಳಿಯ ಮಂತ್ರ
೭) ಸ್ವಾತಂತ್ರ್ಯ ನಮ್ಮ ಹಕ್ಕು.
೮) ಸ್ವಾವಲಂಬನೆಗೆ ಆದ್ಯತೆ
೯) ಒಂದು ದೇಶ ಒಂದು ಕಾನೂನು
೧೦) ದೌರ್ಜನ್ಯದ ವಿರುಧ್ಧ ಸತ್ಯಾಗ್ರಹ
೧೧) ಸ್ವಾಭಿಮಾನದ ಪ್ರತೀಕ ಸ್ವಾತಂತ್ರ್ಯ
೧೩) ಜಾತಿ,ಧರ್ಮಗಳಿಗಿಂತ ಮಿಗಿಲು ಈ ದೇಶ ಪ್ರೇಮ.

ದೇಶದ ಗಡಿಕಾಯುವವನಿಗಿಂತ ದೇಶದೊಳಗೆ ಅಡಗಿರುವ ಅನ್ಯದೇಶಿಯರನು ಓಡಿಸುವ ಕೆಲಸ ಮಹತ್ವದ್ದೆಂದು ಅರಿತು ಭಾರತ ಮಾತೆಯ ಸಂರಕ್ಷಿಸುವ ಸಲುವಾಗಿ ಪಣ ತೊಡಲು ದೇಶ ಭಕ್ತರ ಪಡೆ ಜಾಗೃತವಾಗಿದ್ದು ಹೆಮ್ಮೆ. ದೇಶ ದಲ್ಲಿ ಅಲ್ಪಸ್ವಲ್ಪ ಉಳಿದ ಸಂಪತ್ತನ್ನು ಉಳಿಸಿಕೊಳ್ಳಲು ಹೊರಟ ಗಳಿಗೆಗಳು ಅವಿಸ್ಮರಣೀಯ. ಕೊನೆಗಾದರೂ ನಮ್ಮ ದೇಶ ನಮ್ಮ ಜವಾಬ್ದಾರಿ ಎಂಬ ಹೊಣೆ ಹೊತ್ತವಗೆ ಸಾತು ಕೊಟ್ಟವರು. ಅಹಿಂಸೆಯ ಪಥವ ಹಿಡಿದು ನಡೆದ ಮಹಾತ್ಮ ಗಾಂಧೀಜಿ ಯವರ ಅಸ್ತ್ರಗಳಾದ ಸತ್ಯ, ಸತ್ಯಾಗ್ರಹವು ಆಂಗ್ಲರ ನಿದ್ದೆಗೆಡಿಸಿದ್ದಂತೂ ಅಲ್ಲಗಳೆಯುವಂತಿಲ್ಲ.

“ವಂದೇ ಮಾತರಂ” ಎಂಬ ದೇಶಭಕ್ತಿ ಗೀತೆ ಇಡೀ ಭಾರತ ದ ಉದ್ದಗಲಕ್ಕೂ ಏಕರೂಪದ ಚಳುವಳಿಗಳು…. ಗಾಂಧಿಯ ವರ ಆಣತಿಯಂತೆ ದೇಶಕ್ಕೆ ದೇಶವೇ ಹೋರಾಟ ತೀವ್ರ ಗೊಳಿಸಲು ದೃಢಸಂಕಲ್ಪ…. ಬ್ರಿಟಿಷ್ ರನ್ನು ಭಾರತ ಬಿಟ್ಟು ತೊಲಗಿ ಎಂಬ ಮೂಲಮಂತ್ರ…. ಗಾಂಧಿಯರ ಕಳಕಳಿ ದೇಶ ಸ್ವತಂತ್ರವಾಗಿ ಸ್ವಾವಲಂಬನೆ ಹೊಂದಬೇಕೆಂಬ ತುಡಿತದ ಕನಸು….

ಬ್ರಿಟಿಷ್ ರಿಗೆ ಗಾಂಧೀಜಿ ಯನ್ನು ಗುಂಡಿಟ್ಟು ಕೊಲ್ಲುವುದು ಕಷ್ಟವಾಗಿರಲಿಲ್ಲ.ಆದರೆ ಅವರು ಹಾಗೆ ಮಾಡದಿರಲು ಕಾರಣ ಗಾಂಧಿಯ ಜೊತೆಗೆ ಇಡೀ ಭಾರತ ದೇಶವೇ ಇದೆಯೆಂಬ ಅರಿವು ಮೂಡಲು ತುಂಬ ಹೊತ್ತು ಬೇಕಿರಲಿಲ್ಲ. ಹೀಗಾಗಿ ಹೆದರುತ್ತಿದ್ದರು. ಗಾಂಧಿಯ ಚಿತ್ತಕೆಡಿಸಲು ಕುತಂತ್ರ ಹೆಣೆದರೂ ಅವು ಪ್ರಯೋಜನಕ್ಕೆ ಬರುತ್ತಿರಲಿಲ್ಲ. ಒಬ್ಬಂಟಿಯಾದರೂ ಹೋರಾಟದ ನಿಲುವು ಬದಲಾಗದಿರುವುದು.

ಗಾಂಧೀಜಿಯೇನು ಪೈಲ್ವಾನರಲ್ಲ. ಹಾಗಂತ ನೋಡಿದೊಡನೆ ಆಕರ್ಷಿಸುವ ದೈಹಿಕ ಮೈಕಟ್ಟು ಇಲ್ಲ. ಬಾರಿಸ್ಟರಾಗಲು ಹೊರಟವಗೆ ಕರಿಯೆಂಬ ಬಣ್ಣಕೆ ಅಂಟಿದ ಕರಾಳ ಛಾಯೇಯು ಬಿಳಿಯರು ಅಪಹಾಸ್ಯ ಮಾಡಲು ಮುದ್ರೆ ಒತ್ತಿದಂತಾಗಿ ಹೆಜ್ಜೆ ಹೆಜ್ಜೆಗೂ ಅವಮಾನಕ್ಕೆ ಒಳಗಾದವರು. ಆಫ್ರಿಕಾದಲ್ಲಿ ವರ್ಣ ಬೇಧ ನೀತಿಯ ವಿರುದ್ದ ಸಮರ ಸಾರಿ ನ್ಯಾಯ ದೊರಕಿಸಿ ಕೊಟ್ಟವರು. ಭಾರತಕ್ಕೆ ಮರಳಿದಾಗ ಕಂಡ ಪರಿಸ್ಥಿತಿ ಆಫ್ರಿಕಾ ದೇಶದ ಹೊರತಾಗಿರಲಿಲ್ಲ. ಶಿಕ್ಷಣ ಹಾಗೂ ಸ್ವಾತಂತ್ರ್ಯ ಬಹುಮುಖ್ಯವೆಂದು ಮನಗಂಡವರು. ದೇಶದ ಕೆಳಹಂತದ ದುರ್ಬಲರು ಅನುಭವಿಸುವ ಬಡತನಕೆ ಮನಕರಗಿ ತಾನು ಹಾಗೆಯೇ ಬದುಕಲು ನಿರ್ಧಾರ ಕೈಗೊಂಡು ಸೂಟು, ಬೂಟು, ಬಿಟ್ಟು ಸರಳವಾದ ಉಡುಪು. ಪಂಜೆಯ ನುಟ್ಟು, ಸುಖದ ಜೀವನ ತ್ಯಜಿಸಿ ಕೈಯಲಿ ಕೋಲ ಹಿಡಿದು, ಹೊರಟವ ಸಣಕಲು ದೇಹದ ಯಜಮಾನ. ಕೇರಿಕೇರಿ ಅಲೆಯುತ್ತಾ ಜನರಲ್ಲಿ ಆತ್ಮಬಲವನ್ನು, ನೈತಿಕತೆಯನ್ನು ಬೆಳೆಸುತ್ತಾ, ಸ್ವಾವಲಂಬನೆಯ ಬಿತ್ತುತ್ತಲಿದ್ದ. ಚರಕದೊಂದಿಗೆ ಸ್ವದೇಶಿ ಆಂದೋಲನಕ್ಕೆ ಚಾಲನೆ ನೀಡಿದವ. ಸರಳತೆಯ ಬದುಕ ಪರಿಚಯಿಸುತ್ತಾ ಮುನ್ನಡೆದ ಫಕೀರ… ಸಂತ …. ದೇಶದ ಋಣವ ತೀರಿಸುವ ಪರಿಯ ಸಾರುತ್ತ ಬುದ್ಧನ ಹಾದಿ ಹಿಡಿದು ಶಾಂತಿಯ ಮಂತ್ರ ಪಠಿಸಿದ ಕರ್ಮಯೋಗಿ… ಗಾಂಧಿ ಯಾರೆಂದು ಕೇಳುವ ಮನಗಳಿಗೆ ವಿಶ್ವದ ಶಾಂತಿದೂತ ನಾಗಿ,ರಾಷ್ಟ್ರಪಿತನಾಗಿ ಭಾರತೀಯ ಸಿರಿ ಸಂಪತ್ತಿನ ಭಾವ ಚಿತ್ರವಾಗಿ ನಸುನಗುತ್ತ ಅಚ್ಚಾಗಿರುವ ನೋಟಿನಲಿ ಗಾಂಧಿ ಯವರು ಮನೆಮನೆಗೂ ಸ್ವಾತಂತ್ರ್ಯದ ನಂದಾದೀಪ ಬೆಳಗಿಸುವಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಪಾಳೆಗಾರ.

ಹುಟ್ಟಿದವನು ಸಾಯುವುದು ಖಚಿತವೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಹುಟ್ಟಿಗೊಂದು ಸಾರ್ಥಕತೆ ಬರುವುದು ಆತ ಬದುಕುವ ಶೈಲಿಯ ಮೇಲೆ. ಅವನು ಅಳವಡಿಸಿಕೊಳ್ಳುವ ಆದರ್ಶಗಳು, ನುಡಿದಂತೆ ನಡೆಯುವ ಎದೆಗಾರಿಕೆ ದಿಟ್ಟ ಮನಸ್ಸು ಯಾರಲ್ಲಿ ಬರುವುದೋ ಅಂತವರು ಸಾಮಾನ್ಯ ವ್ಯಕ್ತಿಯಾದರೂ ಅಸಾಮಾನ್ಯರಾಗಿ ಬೆಳೆಯಲು ಸಾಧ್ಯ, ರಾಷ್ಟ್ರಪಿತನಾಗುವವ ಸಾಮಾನ್ಯನೇ? ಆತ ಜೀವನದುದ್ದಕ್ಕೂ ಮಾಡಿರುವ ಸಾಧ ನೆಗಳೇ ಉತ್ತುಂಗಕ್ಕೇರಲು ಏಣಿಯಂತೆ ಸಹಕರಿಸುತ್ತವೆ. ಹೀಗಾಗಿ ಗಾಂಧಿಯ ವಿಚಾರ ಧಾರೆಗಳನ್ನು ಸತ್ಯಮಾರ್ಗ ವನ್ನು ಅನುಸರಿಸುವ ಮನಸ್ಸು ಪ್ರತಿಯೊಬ್ಬ ಭಾರತೀಯರದ್ದಾದರೆ ನಮ್ಮೊಳಗೆ ಅವಿತಿರುವ ಗುಲಾಮಗಿರಿಯಿಂದ ಹೊರಬಂದಂತೆ. ಸ್ವದೇಶಿ ಆಂದೋಲನದ ರೂವಾರಿಗಳು ನಾವಾದಂತೆ. ಗಾಂಧಿ ನೆಪ ಮಾತ್ರ. ನಾವು ಹೀಗೆ ಬದುಕಲು ಪ್ರಯತ್ನಿಸಬಹುದಲ್ಲವೇ….ಇದೇ ನಾವು ಆ ಮಹಾತ್ಮನಿಗೆ ನೀಡುವ ಜನ್ಮ ದಿನದ ಕಾಣಿಕೆ….

— ಶಿವಲೀಲಾ ಹುಣಸಗಿ, ಯಲ್ಲಾಪುರ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

8 Comments

    • U have written comprehensively all important Gandhian thoughts with well illustration.👏👏👏👏

  1. ಸರಳ ಜೀವನ ಉದಾತ್ತ ವಿಚಾರವನು ಬಿತ್ತರಿಸಿದ ಉತ್ತಮವಾದ ಲೇಖನ ಪ್ರತಿಯೊಬ್ಬರೂ ಅಸಾಮಾನ್ಯನಾಗಲು ಬಯಸಿದರೆ ದೃಢಮನ ಛಲ ಶ್ರಮ ಅವಶ್ಯ ಎಂಬುದನು ಚೆನಾಗಿ ಬಿಂಬಿಸಿದಿಯ! ಅಭಿನಂದನೆಗಳು ಗೆಳತಿ

Leave a Reply

Your email address will not be published.


*