“ವಿ.ಗ.ನಾಯಕರ ಬರಹಗಳಲ್ಲಿ ನಾಮಧಾರಿ ಜನಪದ ಸಾಹಿತ್ಯ” : ಪುಸ್ತಕ ಬಿಡುಗಡೆ

ವಿ.ಗ.ನಾಯಕರ ನಾಮಧಾರಿ ಜನಪದ ಸಾಹಿತ್ಯದಲ್ಲಿ ಇತಿಹಾಸ ಕಾಲದ ಅನೇಕ ಘಟನೆಗಳು ಆಧಾರ ಸಹಿತವಾಗಿ ದಾಖಲಾಗಿವೆ. ಕನ್ನಡದ ಅಪರೂಪ ಗ್ರಂಥಗಳಲ್ಲಿ ಇದು ಒಂದಾಗಿದೆ ಎಂದು ಹಿರಿಯ ಸಾಹಿತಿ ರೋಹಿದಾಸ ನಾಯಕ ಹೇಳಿದರು.

ಇತ್ತೀಚೆಗೆ ವಿವೇಕ ನಗರದ ಶಿವರಾಂ ಕಾಂಪ್ಲೆಕ್ಸ್ ನಲ್ಲಿ ನಡೆದ ಹಳೆಪೈಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟನ ಮಾಲೆ ಪ್ರಕಟಿಸಿದ ಎರಡನೇ ಸಂಪುಟ “ವಿ.ಗ.ನಾಯಕರ ಬರೆಹಗಳಲ್ಲಿ ನಾಮಧಾರಿ ಜನಪದ ಸಾಹಿತ್ಯ” ಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿ.ಗ.ನಾಯಕರು ಒಬ್ಬ ಜನಪದ ವಿದ್ವಾಂಸರಾಗಿ ಅನೇಕ ಗ್ರಂಥಗಳನ್ನು ರಚಿಸಿರುತ್ತಾರೆ. ಚೆನ್ನಬೈರಾ ದೇವಿಯ ಬಗ್ಗೆ, ಕೆಳದಿಯ ಶಿವಪ್ಪ ನಾಯಕರ ಬಗ್ಗೆ, ಕೃಷ್ಣದೇವರಾಯನ ಸಂಸ್ಥಾನಗಳಲ್ಲಿ ಹಳೆಪೈಕರ ಕುರಿತಾಗಿ ದಾಖಲಿಸಿದ ಎಲ್ಲಾ ಅಂಶಗಳು ಸಂಶೋಧನಾತ್ಮಕವಾಗಿ ಈ ಗ್ರಂಥದಲ್ಲಿದೆ ಎಂದರು.

ಗ್ರಂಥ ಬಿಡುಗಡೆ ಮಾಡಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲೆ ಡಾ. ವಿಜಯಲಕ್ಷ್ಮಿ ನಾಯ್ಕ ಮಾತನಾಡಿ, ಆಧುನಿಕ ಜಗತ್ತಿಗೆ ಮಾರುಹೋದ ನಾವು ಹಿಂದಿನ ಜನಪದ ಸಾಹಿತ್ಯವನ್ನು ಮರೆತಿದ್ದೇವೆ. ಮದುವೆ, ದೇವರ ಕಾರ್ಯಗಳೆಲ್ಲಲ್ಲ ಹಿರಿಯ ತಾಯಂದಿರು ಜನಪದ ಹಾಡುಗಳ ಮೂಲಕ ವಾಸ್ತವ ಬದುಕನ್ನು ಕಟ್ಟಿಕೊಡುತ್ತಿದ್ದರು. ಆದರೆ ಅವೆಲ್ಲ ಈಗ ಮರೆಯಾಗಿದೆ. ವಿ.ಗ. ನಾಯಕರು ರಚಿಸಿದ ಗ್ರಂಥ ಮುಂದಿನ ಪೀಳಿಗೆಗೆ ನಾಮಧಾರಿಗಳ ಜನಪದ ಸಾಹಿತ್ಯವನ್ನು ಅರಿಯಲು ಸಹಾಯಕವಾಗಲಿದೆ ಎಂದರು.

ಹಿರಿಯ ಜನಪದ ವಿದ್ವಾಂಸ ಡಾ ಎನ್. ಆರ್ .ನಾಯಕ ಮಾತನಾಡಿ, ಸಾಹಿತ್ಯ , ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ಕಾಳಜಿ ಇರುವ ಕೆಲವೇ ಕೆಲವು ಜನರಲ್ಲಿ ವಿ.ಗ.ನಾಯಕರು ಬ್ಬರು. ಇವರ ತೀಕ್ಷ್ಣವಾದ ಸಂಶೋಧನಾತ್ಮಕ ಬುದ್ಧಿ ಈ ಕೃತಿ ರಚನೆಗೆ ನೆರವಾಗಿದೆ ಎಂದರು.

ಗ್ರಂಥ ರಚನಾಕಾರ ವಿ.ಗ.ನಾಯ್ಕ ಮಾತನಾಡಿ, ನಿರಂತರ ಅಧ್ಯಯನ ಮತ್ತು ಸಮಾಜದ ಬಗ್ಗೆ ಹೊಸತನ್ನು ಹುಡುಕುವ, ಅದನ್ನು ವಿಶ್ಲೇಷಿಸುವ ಕೆಲಸ ನಮ್ಮಿಂದ ಆದರೆ ಇಂತಹ ಅಧ್ಯಯನಶೀಲ ಕೃತಿಗಳು ಹೊರಬರಲು ಸಾಧ್ಯ. ವಿದ್ಯಾರ್ಥಿ ದೆಸೆಯಿಂದಲೇ ಬರೆಯುವುದನ್ನು ರೂಢಿಸಿಕೊಂಡ ನನಗೆ ಗುರುಗಳ ಮಾರ್ಗದರ್ಶನ ಮರೆಯಲು ಸಾಧ್ಯವಿಲ್ಲ ಎಂದರು.

ಪ್ರಧಾನ ಸಂಪಾದಕ ಸುಮುಖಾನಂದ ಜಲವಳ್ಳಿ ಮಾತನಾಡಿ, ನಾಮಧಾರಿ ಸಮಾಜದ ಜನಪದ ಸಾಹಿತ್ಯವು ಇತರ ಜನ ವರ್ಗಕ್ಕೆ ಮಾದರಿಯಾಗಿದೆ. ಅದನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಇದೇ ಸಂದರ್ಭದಲ್ಲಿ ಹಾಡುಗಾರ್ತಿಯರಾದ ಸಾವಿತ್ರಿ ನಾಯ್ಕ ಮತ್ತು ಲಕ್ಷ್ಮಿ ನಾಯ್ಕ ಅನೇಕ ಜನಪದ ಹಾಡುಗಳನ್ನು ಹಾಡಿ ರಂಜಿಸಿದರು. ಸಾಹಿತಿ ಎನ್.ಆರ್. ಗಜು ಗ್ರಂಥ ಪರಿಚಯಿಸಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಎಂ.ಜಿ. ನಾಯ್ಕ, ಮುಖ್ಯಾಧ್ಯಪಕ ಪಿ.ಎಂ.ಮುಕ್ರಿ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಸಿ.ಎಂ. ಪಟಗಾರ, ಪ್ರಮೋದ ನಾಯ್ಕ, ಪ್ರಕಟನಾ ಸಮಿತಿಯ ಪಿ.ಆರ್. ನಾಯ್ಕ, ಎಂ.ಎಂ.ನಾಯ್ಕ, ಮೋಹನ ನಾಯ್ಕ, ವಿನಾಯಕ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕಲಾವಿದ ಮೋಹನ ನಾಯ್ಕ ಸ್ವಾಗತಿಸಿದರೆ, ಕೊನೆಯಲ್ಲಿ ವಿನಾಯಕ ನಾಯ್ಕ ವಂದಿಸಿದರು. ಮಮತಾ ನಾಯ್ಕ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿ.ಗ.ನಾಯಕ ದಂಪತಿಗಳನ್ನು ಹಾಗೂ ಹಾಡುಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ವರದಿ : ಪಿ.ಆರ್. ನಾಯ್ಕ, ಹೊಳೆಗದ್ದೆ

ಕಾರ್ಯಕ್ರಮದ ವಿಡಿಯೋ ನೋಡಿ….

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*