Site icon ಒಡನಾಡಿ

ದಾಂಡೇಲಿ ಕಸಾಪದಿಂದ ಗಾಂಧೀಜಿ ಜಯಂತಿ : ಉಪನ್ಯಾಸ ಕಾರ್ಯಕ್ರಮ

ದಾಂಡೇಲಿ: ಗಾಂಧಿಜೀ ಬೌತಿಕವಾಗಿ ದೇಹಾಂತ್ಯ ವಾಗಿದ್ದಾರೆ. ಆದರೆ ಅವರ ಸಿದ್ದಾಂತಕ್ಕೆ, ವಿಚಾರಗಳಿಗೆ ಯಾವತ್ತೂ ಸಾವಿಲ್ಲ ಎನ್ನುವುದು ಅಷ್ಟೇ ಸತ್ಯ ಎಂದು ಕೆನರಾ ವೆಲ್‌ಪೇರ್ ಟ್ರಸ್ಟ್ ಬಿ.ಇಡಿ.ಕಾಲೇಜಿನ ಉಪನ್ಯಾಸಕ ನಾಗೇಶ ನಾಯ್ಕ ಹೇಳಿದರು.

ಅವರು ದಾಂಡೇಲಿ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಾಂಡೇಲಿ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ‘ಗಾಂಧಿ ತತ್ವ ಸ್ಮರಣೆ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ನಿಮ್ಮ ಬದುಕಿನ ಬೆಳಕು ನಿಮ್ಮ ಶ್ರಮ ಮತ್ತು ಸತ್ಯ, ಅಹಿಂಸೆ ಮಾರ್ಗದಲ್ಲಿದೆ ಎಂದು ಗಾಂಧಿಜೀ ಹೇಳಿದ್ದರು. ಗಾಂಧೀಜಿಯವರ ತತ್ವಗಳು ವಿಶ್ವ ಮಾನ್ಯವಾದವು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಅಶ್ಪಾಕ ಅಹ್ಮದ್ ಶೇಖ ಮಾತನಾಡಿ, ಗಾಂಧಿ ತತ್ವ ಹಾಗೂ ಬದುಕಿನ ಸಿದ್ದಾಂತಗಳು ಇಂದಿಗೂ ಪ್ರಸ್ತುತ ಗಾಂಧೀಜಿಯವರು ನುಡಿದಂತೆ ನಡೆದವರು. ಅವರು ಸ್ವಾತಂತ್ರ್ಯ ಹೋರಾಟದ ಜೊತೆಗೆ ಸೌಹಾರ್ದತೆ, ಸಮತೆ, ಸ್ವಚ್ಚತೆಗಾಗಿ ಚಳುವಳಿಯನ್ನೇ ಮಾಡಿದವರು. ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ ಗಾಂಧಿ ಹಾಗೂ ಶಾಸ್ತ್ರೀ ಇಂದಿನ ಯುವ ಜನತೆಗೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ ಎನ್ನುವುದು ದುರಂತ. ಆ ಕೆಲಸ ಜರೂರಾಗಿಬೇಕು. ಗಾಂಧಿ ಹಂತಕರನ್ನು ಪೂಜಿಸುವ ಮನಸ್ಥಿತಿ ಅಪಾಯಕಾರಿಯಾದುದು. ಇದು ಅರಿವಿನ ಕೊರತೆ ಎಂದರು.

ಶಿರಸ್ತೇದಾರರ ಗೋಪಿ ಚೌವ್ಹಾಣ, ಸಮಾಜ ಸೇವಕಿ ನೀಲಾಂಬಿಕಾ ಕಣಿವೆಹಳ್ಳಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುರ್ತುಜಾಹುಸೇನ್ ಆನೆಹೊಸೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ವಹಿಸಿ, ಮಾತನಾಡಿದರು.

ಕರಿಯಂಪಾಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಉಜ್ವಲಾ ಸದಲಗಿ ಕಾರ್ಯಕ್ರಮದ ದಾಸೋಹವನ್ನು ನಡೆಸಿಕೊಟ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿದರು.

ಕಸಾಪ ಗೌರವ ಕಾರ್ಯದರ್ಶಿ ಪ್ರವೀಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ ಜಗಲಿ ಕಾರ್ಯಕ್ರಮದಲ್ಲಿ ಶ್ರೀ ಸತ್ಯ ಸಾಯಿ ಸೇವಾ ಬಾಲ ವಿಕಾಸದ ಹಾರ್ನೋಡಾ, ಮೈನಾಳ, ಬಡಕಾನಶಿರಡಾ ಗ್ರಾಮದ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಶಿಕ್ಷಕಿ ಉಜ್ವಲ ಸದಲಗಿ ಸ್ವಾಗತಿಸಿದರು. ಆಶಾ ದೇಶಬಂಡಾರಿ ನಿರೂಪಿಸಿದರು, ಶ್ರೀಮಂತ ಮದರಿ ವಂದಿಸಿದರು. ಕಸಾಪ ಕಾರ್ಯದರ್ಶಿ ಗುರುಶಾಂತ ಜಡೆಹೀರೆಮಠ, ಸುರೇಶ ಪಾಲನಕರ ಸಹಕರಿಸಿದರು.

Exit mobile version