Site icon ಒಡನಾಡಿ

ಡಾ.ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ ಪ್ರಧಾನ : ಸಾಹಿತಿ ದೀಪಾಲಿ ಸಾಮಂತರ  ಕೃತಿಗಳ ಅನಾವರಣ

ದಾಂಡೇಲಿ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ದಾಂಡೇಲಿ ಘಟಕದ ಅಧ್ಯಕ್ಷರು ಹಾಗೂ ಸಾಹಿತಿ ದೀಪಾಲಿ ಸಾಮಂತರ ‘ಮಧು ಭಾವ ಶರಧಿ’ ಮತ್ತು  ‘ನಕ್ಕರದುವೇ ನಾಕವು’ ಕೃತಿಗಳ ಲೋಕಾರ್ಪಣೆಯ ಜೊತೆಗೆ ಐವರು ಸಾಧಕರಿಗೆ ರಾಜ್ಯ ಮಟ್ಟದ ಡಾ. ದಿನಕರ ದೇಸಾಯಿ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಕವಿ ಗೋಷ್ಠಿ ದಾಂಡೇಲಿಯ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ  ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ, ‘ಮಧು ಭಾವ ಶರಧಿ’ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅವರು ಯಾವುದೇ ಅರ್ಜಿಯನ್ನು ಬಯಸದೆ ನಿಜವಾದ ಸಾಧಕರನ್ನು ಸನ್ಮಾನಿಸುವ ಕಾರ್ಯ ನಮ್ಮ ಸಂಸ್ಥೆ ಪ್ರತೀ ವರ್ಷ ಮಾಡುತ್ತ ಬಂದಿದೆ. ಸಾಹಿತಿ ದೀಪಾಲಿ ಸಾಮಂತವರು ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದ್ದು, ಅವರ ಎರಡು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಬಂದಿರುವುದು ಮಹತ್ವದ ಕೊಡುಗೆಯಾಗಿದೆ ಎಂದರು.

‘ನಕ್ಕರದುವೇ ನಾಕವು’ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ಎಸ್. ಜೈನ್ ಮನುಷ್ಯನಿಂದ ಹಿಡಿದು ಪ್ರತಿಯೊಂದು ಜೀವಿಗೂ ಸಾವಿದೆ. ಕಟ್ಟಿದ ಕಟ್ಟಡ ಬೀಳಬಹುದು, ದೇಣಿಗೆಯಾಗಿ ಕೊಟ್ಟ ವಸ್ತುಗಳು ಹಾಳಾಗಬಹುದು. ಆದರೆ ಬರೆದ ಅಕ್ಷರಗಳು ಸದಾ ಜೀವಂತವಾಗಿರುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದರು.

ಮುಖ್ ಅತಿಥಿಗಳಾಗಿ ಭಾಗವಹಿಸಿದ್ದ ವೇದಿಕೆಯ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ದೀಪಾಲಿ ಸಾಮಂತ ಅವರ ಕ್ರಿಯಾಶೀಲತೆ ಬದ್ಧತೆ ಹಾಗೂ ಸಾಹಿತ್ಯ ಚಟುವಟಿಕೆ ಅನುಕರಣೀಯ ಮತ್ತು ಅಭಿನಂದನೆಯ ಎಂದರು. ಸಾಹಿತಿ ಅಬ್ದುಲ್ ರೆಹಮಾನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಐವರು ಸಾಧಕರುಗಳಾದ ದಾಂಡೇಲಿಯ ಕುಶಾಲ್ ಶರದ್ ಕುಲಕರ್ಣಿ, ಮೈಸೂರಿನ ಮಹಮುದ್ ಅಂಜುಮ್ ಪಾಷಾ, ಕೊಡಗಿನ ರಶ್ಮಿ ಚಂಗಚಡ, ವಿಜಯಪುರದ ಗುರುಲಿಂಗಪ್ಪ ಮಲ್ಲಪ್ಪ ಹಳ್ಳೂರ ಇವರಿಗೆ ರಾಜ್ಯಮಟ್ಟದ ಡಾ.ದಿನಕರ ದೇಸಾಯಿ ಸಾಹಿತ್ಯ ಪುರಸ್ಕಾರ ಪ್ರಧಾನ ಮಾಡಲಾಯಿತು.

ಸನ್ಮಾನಿತರ ಪರವಾಗಿ ಮಹಮುದ್ ಅಂಜುಮ್ ಪಾಷಾ ಅವರು ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ಎನ್.ಆರ್.ನಾಯ್ಕ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಧಾರವಾಡ ಜಿಲ್ಲಾಧ್ಯಕ್ಷ ಎ.ಎ.ದರ್ಗಾ ಕೃತಿ ಪರಿಚಯಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷೆ ಹಾಗೂ ಕೃತಿಕಾರರಾದ ದೀಪಾಲಿ ಸಾಮಂತ ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ಸಾಹಿತ್ಯ ಸೇವೆಗೆ ನೆರವಾದವರನ್ನು ಸ್ಮರಿಸಿದರು.

ಶೋಭಾ ಕೋಲಕಾರ್ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಗಿರೀಶ ಶಿರೋಡ್ಕರ್ ವಂದಿಸಿದರು. ನಂತರ ಕಾವ್ಯ ನೀನಾದ ಜಿಲ್ಲಾಮಟ್ಟದ ಕವಿಗೋಷ್ಠಿ ನಡೆಯಿತು.

Exit mobile version