Site icon ಒಡನಾಡಿ

ರಾಜ್ಯಪಾಲರ ಸಂವಿಧಾನ ವಿರೋಧಿ ನಡೆ ಸಹ್ಯವಾದುದಲ್ಲ ಎಂದ ದೇಶಪಾಂಡೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ದೂರು ದಾಖಲಿಸುವಂತೆ ಟಿ.ಎಂ. ಅಬ್ರಾಹಂ ನೀಡಿದ ಮನವಿಯನ್ನ ಪುರಸ್ಕರಿಸಿ ಸಮ್ಮತಿ ನೀಡಿರುವ ರಾಜ್ಯಪಾಲರ ನಡೆ ಸಂವಿಧಾನ ವಿರೋಧಿ ಯಾದದ್ದು. ಕಾನೂನು ವಿರೋಧಿ ಯಾದದ್ದು. ಇದು ಸಹ್ಯವಾದದಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್. ವಿ. ದೇಶಪಾಂಡೆ ಆಕ್ಷೇಪಿಸಿದರು.

ದಾಂಡೇಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ರಾಜ್ಯಪಾಲರ ಈ ನಡೆ ಅವರ ಸ್ಥಾನಕ್ಕೆ ಗೌರವ ತರುವಂತದ್ದಲ್ಲ. ರಾಜಕೀಯವನ್ನು ರಾಜ್ಯಪಾಲರು ಬಳಸಿಕೊಳ್ಳುವುದು ಸರಿಯಲ್ಲ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಹಾಗೂ ಎನ್.ಡಿ.ಎ. ಸರ್ಕಾರದ ಪ್ರಭಾವಕ್ಕೆ ಮಣಿದು ರಾಜ್ಯಪಾಲರು ಈ ಕಾನೂನು ವಿರೋಧಿ ಕ್ರಮ ತಗೊಂಡಿದ್ದಾರೆ. ಇದರಿಂದಾಗಿ ಅವರು ಸವಿಂದಾನಕ್ಕೆ ಅವಮಾನ ಮಾಡಿದಂತಾಗಿದೆ. ಅಷ್ಟೇ ಅಲ್ಲ ಕರ್ನಾಟಕದ ಜನತೆಗೂ ಕೂಡ ಅವಮಾನ ಮಾಡಿದಂತಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯನ್ನು ಹೊಂದಿದವರಲ್ಲ. ನೇರ ನಿಷ್ಠುರವಾದಿಗಳಾಗಿರುವ ಅವರು, ತಮ್ಮ ರಾಜಕೀಯ ಬದುಕಿನಲ್ಲಿಯೂ ಕೂಡ ಅಷ್ಟೇ ಪರಿಶುದ್ಧತೆಯನ್ನು ಇಟ್ಟುಕೊಂಡವರು. ಕಾಂಗ್ರೆಸ್ ಪಕ್ಷದ ಹಾಗೂ ರಾಜ್ಯ ಸರ್ಕಾರದ ಹಲವಾರು ಅಭಿವೃದ್ಧಿ ಯೋಜನೆಗಳನ್ನು, ಗ್ಯಾರಂಟಿ ಯೋಜನೆಗಳನ್ನ ಸಹಿಸಿಕೊಳ್ಳಲಾಗದ ಪ್ರತಿಪಕ್ಷದವರು ಯಾವುದಾದರೂ ದಾರಿಯಲ್ಲಿ ಸರ್ಕಾರವನ್ನ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ರಾಜಕೀಯಕ್ಕೆ ರಾಜ್ಯಪಾಲರ ಹುದ್ದೆಯನ್ನು ಬಳಸಿಕೊಳ್ಳುತ್ತಿದ್ದು ರಾಜ್ಯಪಾಲರು ವಾಮ ಮಾರ್ಗದಿಂದ ಇಂತಹ ಕೆಲಸ ಮಾಡುತ್ತಿರುವುದು ಕೂಡ ಸರಿಯಲ್ಲ. ನನ್ನ ರಾಜಕೀಯ ಜೀವನದ ಐವತ್ತು ವರ್ಷಗಳಲ್ಲಿ ಯಾವ ರಾಜ್ಯಪಾಲರೂ ಕೂಡ ಇಂತಹ ಸವಿಂಧಾನ ವಿರೋಧಿ ಕೆಲಸ ಮಾಡಿದ್ದನ್ನು ನಾನು ಕಂಡಿಲ್ಲ. ಹಾಗಾಗಿ ರಾಜ್ಯಪಾಲರ ಈ ನಡೆಯನ್ನು ನಾನು ಖಂಡಿಸುತ್ತೇನೆ. ಹಾಗೂ ರಾಜ್ಯಪಾಲರು ಸವಿಂದಾನಕ್ಕೆ ಗೌರವ ಕೊಟ್ಟು ಅವರು ನೀಡಿರುವ ಈ ಸಮ್ಮತಿಯ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕು ಜೊತೆಗೆ ನೀಡಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Exit mobile version