Site icon ಒಡನಾಡಿ

ಶಿರೂರು ಗುಡ್ಡಕುಸಿತದಲ್ಲಿ ಸಂತ್ರಸ್ಥರಾದ ಉಳುವರೆ ವಿದ್ಯಾರ್ಥಿಗಳಿಗೆ ಜಿಲ್ಲಾ ಕಸಾಪದಿಂದ ಪಾಠೋಪಕರಣ ವಿತರಣೆ

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕಸಿತದ ಪರಿಣಾಮವಾಗಿ ಸಂತ್ರಸ್ತರಾದ ಪಕ್ಕದ ದಂಡೆಯ ಉಳುವರೆ ಗ್ರಾಮದ ಸಂತ್ರಸ್ಥ ವಿದ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಾಠೋಪಕರಣ ಹಾಗೂ ಅಗತ್ಯ ಸಾಮಗ್ರಿಗಳ ನೆರವು ನೀಡಿದರು.

ಉಳುವರೆ ಶಾಲಾ ವಿದ್ಯಾರ್ಥಿಗಳೊಂದಿಗೆ….

ಗುಡ್ಡ ಕುಸಿತದ ಪರಿಣಾಮ ನದಿಯ ವಿರುದ್ಧ ದಿಕ್ಕಿನ ದಂಡೆಯ ಉಳುವರೆ ಗ್ರಾಮದ ಆರು ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿದ್ದವು. ಅಲ್ಲಿಯ ಮನೆಗಳಲ್ಲಿದ್ದ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದು , ಒಂದು ಕಡೆಯಾದರೆ ಇನ್ನು ಆ ಮನೆಯ ಒಳಗಡೆ ಇದ್ದ ಸಂಪೂರ್ಣ ಆಸ್ತಿಪಾಸ್ತಿಗಳು ನೀರು ಪಾಲಗಿದ್ದವು. ಅಷ್ಟೇ ಅಲ್ಲ. ಅಲ್ಲಿಯ ಶಾಲಾ ವಿದ್ಯಾರ್ಥಿಗಳ ಬಟ್ಟೆ, ಬರೆ ಸೇರಿದಂತೆ ಯಾವೊಂದು ಶಾಲಾ ಸಾಮಗ್ರಿಗಳು ಕೂಡ ಇರಲಿಲ್ಲ. ಎಲ್ಲವೂ ನೀರು ಪಾಲಾಗಿದ್ದವು. ಜೊತೆಗೆ ಉಳುವರೆಯ ಗ್ರಾಮದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ದುರಂತದಲ್ಲಿ ಸಂತ್ರಸ್ಥರಾಗಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆಯವರು ತಮ್ಮ ಜಿಲ್ಲಾ ಸಮಿತಿ ಸದಸ್ಯರು, ತಾಲೂಕು ಅಧ್ಯಕ್ಷರು ಹಾಗೂ ತಮ್ಮ ಆಪ್ತ ಗೆಳೆಯರು, ದಾನಿಗಳಿಂದ ಒಂದಿಷ್ಟು ಶಾಲಾ ಸಾಮಗ್ರಿಗಳನ್ನು ಸಂಗ್ರಹಿಸಿ ಶುಕ್ರವಾರ ಅದನ್ನ ಸಂತ್ರಸ್ತ ವಿದ್ಯಾರ್ಥಿಗಳಿಗೆ ವಿತರಿಸಿದರು. ಸಂತ್ರಸ್ತ ವಿದ್ಯಾರ್ಥಿಗಳ ಜೊತೆಗೆ ಉಳುವರೆ ಶಾಲೆಯ 55 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ಕೂಡ ನೋಟ್ ಬುಕ್, ಎಕ್ಸಾಂ ಪೆಡ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ನೀಡಿದರು. 30 ಸಂತ್ರಸ್ತ ವಿದ್ಯಾರ್ಥಿಗಳಿಗೆ ನಗದು ಸಹಾಯವನ್ನೂ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆಯವರು ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಮ್ಮೇಳನ ಹಾಗೂ ಸಾಹಿತ್ಯದ ಕಾರ್ಯಕ್ರಮ ಸಂಘಟಿಸುವುದಕ್ಕಷ್ಟೇ ಸೀಮಿತವಾಗದೇ, ಅದು ಕಷ್ಟದಲ್ಲಿರುವ ಜನರ ನೋವಿನಲ್ಲಿಯೂ ಜೊತೆಯಾಗ ಬೇಕು. ಅಸಹಾಯಕರಿಗೆ ಸಹಾಯ ಮಾಡಬೇಕು ಎಂಬ ನಿಜ ಕಾಳಜಿಯೊಂದಿಗೆ ಈ ಸೇವಾ ಕಾರ್ಯ ಮಾಡಲಾಗಿದೆ. ಒಬ್ಬರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಮನುಷ್ಯ ಧರ್ಮ. ಇಂತಹ ಕೆಲಸಗಳ ಮೂಲಕ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತಾಗಬೇಕೆಂಬುದೂ ಕೂಡಾ ನಮ್ಮ ಆಶಯ. ಆ ನಿಟ್ಟಿನಲ್ಲಿ ಸಂತ್ರಸ್ಥ ಶಾಲಾ ಮಕ್ಕಳಿಗೆ ಈ ಸಹಾಯ ಮಾಡಲಾಗಿದೆ. ಜಿಲ್ಲೆಯ ಕಸಾಪ ಇತಿಹಾಸದಲ್ಲಿಯೇ ಮೊಟ್ಟ ಮೊದಲಿಗೆ ಸಾಹಿತ್ಯ ಪರಿಷತ್ತಿನಿಂದ ಇಂತಹದ್ದೊಂದು ಜನ ಸೇವಾ ಕಾರ್ಯ ನಡೆದಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸಂತ್ರಸ್ಥ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದು ನಿಜಕ್ಕೂ ಮಾನವೀಯ ಕಾರ್ಯವಾಗಿದೆ. ಸಾಹಿತ್ಯ ಪರಿಷತ್ತು ಇಂತಹ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಮಾದರಿಯಾದುದು ಎಂದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಸಹಾಯ ಮಾಡಿದ ದಾನಿಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಕಸಾಪ ಅಂಕೋಲಾ ತಾಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಹೊನ್ನಾವರ ತಾಲೂಕು ಘಟಕದ ಅಧ್ಯಕ್ಷ ಎಸ್. ಹೆಚ್ ಗೌಡ, ಜಿಲ್ಲಾ ಸಮಿತಿಯ ಸದಸ್ಯ ಡಾ. ವೆಂಕಟೇಶ ನಾಯ್ಕ, ಪಿ.ಎಮ್. ಮುಕ್ರಿ, ಹಿರಿಯ ಸಾಹಿತಿ ಬೀರಣ್ಣ ಎಂ. ನಾಯಕ, ಹಿರೇಗುತ್ತಿ, ಪ್ರಮುಖರಾದ ಸಾಯಿ ಗಾಂವ್ಕರ, ಪ್ರಕಾಶ ಕುಂಜಿ, ಎಂ.ಬಿ. ಆಗೇರ, ಸುಜಿತ್ ನಾಯ್ಕ, ಕಸಾಪ ಆಜೀವ ಸದಸ್ಯರು, ದಾಂಡೇಲಿಯ ಸಮಾಜ ಸೇವಕರು ಆದ ಎಸ್. ಪ್ರಕಾಶ ಶೆಟ್ಟಿ, ಟಿ. ಎಸ್. ಬಾಲಮಣಿ, ಮೋಹನ ಹಲವಾಯಿ, ಕೀರ್ತಿ ಗಾಂವಕರ, ಮುಸ್ತಾಕ ಶೇಖ್, ಅನಿಲ ದಂಡಗಲ, ಅನಿಲ ನಾಯ್ಕರ, ಫ್ರಾನ್ಸಿಸ್ ಮಸ್ಕರಿನಸ್, ವಾಸರಕುದ್ರಿಗೆ ಗ್ರಾ.ಪಂ. ಅಧ್ಯಕ್ಷ ಪ್ರದೀಪ ನಾಯಕ, ಶಾಲಾ ಶಿಕ್ಷಕಿ ಸಂಧ್ಯಾ ನಾಯ್ಕ ಮುಂತಾದವರು ಇದ್ದರು.

ಉಳುವರೆಯ ಪ್ರತಿಯೊಬ್ಬ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ತಲಾ ಹತ್ತು ನೋಟ್ ಬುಕ್, ಕಂಪಾಸ ಬಾಕ್ಸ, ಎಕ್ಸಾಮ ಪೆಡ್ , ರೇನ್ ಕೋಟ್ , ಪೆನ್, ಪೆನ್ಸಿಲ್ ಸೆಟ್, ಟೀ ಶರ್ಟ್ , ಬೆಡ್ ಶೀಟ್ ,ಟಾವೆಲ್, ಹಾಗೂ ತಲಾ ಹತ್ತು ಕೆ.ಜಿ. ಅಕ್ಕಿ ಹಾಗೂ ಕಾಳಜಿ ಕೇಂದ್ರಕ್ಕೆ ಒಂದು ಕ್ವಿಂಟಲ್ ಅಕ್ಕಿ ನೆರವು ನೀಡಿದರು. ಹಾಗೂ ಸಂತ್ರಸ್ಥ ವಿದ್ಯಾರ್ಥಿಗಳಿಗೆ ನಗದು ಸಹಾಯವನ್ನೂ ಕನ್ನಡ ಸಾಹಿತ್ಯ ಪರಿಷತ್ತಿನವರು ಮಾಡಿದರು.

Exit mobile version