Site icon ಒಡನಾಡಿ

ಅಗಸ್ಟ್ 6ರಂದು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ

ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆಯನ್ನು ಅಗಸ್ಟ್ 6 ರವಿವಾರದಂದು ಮುಂಜಾನೆ 11.30 ಗಂಟೆಗೆ ದಾಂಡೇಲಿಯ‘ಸಾಹಿತ್ಯ ಭವನ’ (ಹಳೆ ನಗರಸಭೆ ಕಟ್ಟಡದ ಆವರಣ) ದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಒಂದು ಸಂಘಟನೆ ತನ್ನ ಯಶಸ್ಸನ್ನು ಕಾಣಬೇಕೆಂದರೆ ಅದರ ಹಣಕಾಸಿನ ವ್ಯವಹಾರ ಪಾರದರ್ಶಕವಾಗಿರಬೇಕು. ಸಾರ್ವಜನಿಕರಿಂದ ಹಾಗೂ ಸರಕಾರದಿಂದ ಬಂದ ಹಣದ ವಿವರ ಹಾಗೂ ಮಾಡಿರುವ ಖರ್ಚು-ವೆಚ್ಚದ ವಿವರವನ್ನು ಸಾರ್ವಜನಿಕವಾಗಿ ಒಪ್ಪಿಸಿದಾಗಲೇ ಅದಕ್ಕೊಂದು ಶಿಸ್ತು. ಜೊತೆಗೆ ನಂಬಿಕೆ ಕೂಡಾ. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಸಂದರ್ಭದಲ್ಲಿ ನಾವು ಪ್ರತೀ ವರ್ಷ ಜಿಲ್ಲಾ ಮಟ್ಟದಲ್ಲಿ ಕಸಾಪ ಆಜೀವ ಸದಸ್ಯರ ಸಭೆ ಕರೆದು ವಾರ್ಷಿಕ ಲೆಕ್ಕ ಒಪ್ಪುಸುವುದಾಗಿ ಹೇಳಿದ್ದೆವು. ಅದರ ಭಾಗವಾಗಿ ಇದೀಗ ಕಸಾಪ ಆಜೀವ ಸದಸ್ಯರ ಸಭೆ ಕರೆಯಲಾಗಿದೆ.

ಸಭೆಯಲ್ಲಿ 2021-22 ಹಾಗೂ 2022-23 ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲಾ ಕಸಾಪಕ್ಕೆ ಬಂದ ಅನುದಾನ ಹಾಗೂ ಖರ್ಚು ವೆಚ್ಚಗಳ ಮಂಡನೆ (ಆಡಿಟ್ ವರದಿ ಸಹಿತ) ಮಾಡಲಾಗುವುದು. ಜೊತೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಆಜೀವ ಸದಸ್ಯರಿಂದ ಸಲಹೆ ಪಡೆದು ಚರ್ಚೆ ನಡೆಸಲಾಗುವುದು. ಈ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಕಸಾಪ ನಿಬಂಧನೆ ೩೦ (೬) ರ ಪ್ರಕಾರ ಸಾಮಾಜಿಕ ಜಾಲತಾಣದ ಮೂಲಕ ತಮಗೆ ತಲುಪುವ ಪತ್ರವನ್ನು ಹಾಗೂ ಪತ್ರಿಕಾ ಪ್ರಕಟಣೆಯನ್ನು ಅಧಿಕೃತ ಸಭಾ ಸೂಚನಾ ಪತ್ರವೆಂದು ಪರಿಗಣಿಸಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮನವಿ ಮಾಡಿದ್ದಾರೆ.

Exit mobile version