Site icon ಒಡನಾಡಿ

‘ಕೋವಿಗೊಂದು ಕನ್ನಡಕ’ ಹೊನ್ನಾವರದಲ್ಲಿ ಯಶಸ್ವೀ ಪ್ರದರ್ಶನ

ತೆಳುವಾದ ಸಂಗೀತದೊಂದಿಗೆ ನಾಟಕ ಪ್ರಾರಂಭವಾಗಿದೆ. ಕನ್ನಡಕ ಫ್ರೇಮಿನಾಕಾರದ ಕಾರ್ಪೆಟ್ಟಿನ ಮೂರು ಮೂಲೆಗಳಿಂದ ಮೂರು ಮಂದಿ ಅರೆನಾ ವನ್ನು ಪ್ರವೇಶಿಸಿದ್ದಾರೆ. ಮೂವರೂ ಬಾಯ್ಕಟ್ಟು ಕಟ್ಟಿಕೊಂಡಿದ್ದಾರೆ. ಒಂದು ಸಂಧಿಯಲ್ಲಿ ಸೇರುವ ಮೂವರದೂ ಒಂಥರಾ ಗುಮಾನಿಯ ನೋಟ. ನಿಧಾನಕ್ಕೆ ಒಬ್ಬೊಬ್ಬರೂ ಬಾಯ್ಕಟ್ಟು ಬಿಚ್ಚುತ್ತಾ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತ ಗಹಗಹಿಸಿ ನಗತೊಡಗುತ್ತಾರೆ. ಇಂಥದೊಂದು ಸ್ಫೋಟಕ ನಗುವಿನ ಜೊತೆಯಲ್ಲೇ ಆಟ ಶುರುವಾಗುತ್ತದೆ.

ಬಾಯ್ಕಟ್ಟು ಬಿಚ್ಚುತ್ತಿದ್ದ ಹಾಗೇ ಶುರುವಾಗೋದು ಕಣ್ಕಟ್ಟಿನಾಟ. ಈ ಆಟವಾದರೋ ದೇಶದ ಸಮಕಾಲೀನ ಸಮಾಜೋಸಾಹಿತ್ಯಕ ಸ್ಥಿತಿಯ ಹೂಬೇಹೂಬು ಅಣಕಿನಾಟವೇ.

ಪರಂಪರಾಗತವಾಗಿ ಬಂದ ಕೋವಿಯನ್ನ ಹೆಗಲಿಗೆ ತಗಲುಹಾಕಿಕೊಂಡ ತಾತ. ಅವನದೇ ಮನಸ್ಥಿತಿಯನ್ನ ಹೊತ್ತು ಬಂದ ಮೊಮ್ಮಗ. ತಾತನಿಗೆ ಕಣ್ಣು ಕಾಣುತ್ತಿಲ್ಲ, ಓದೋದಕ್ಕೂ ಬರೋದಿಲ್ಲ. ಆದರೆ ಅರಿವಿಲ್ಲದ ಮೆದುಳಲ್ಲಿ ‘ಅವರ’ ಕುರಿತ ಅಪಾರವಾದ ದ್ವೇಷ. ಆ ದ್ವೇಷ ಯಾಕೆ ಎಂದು ತಿಳಿದಿಲ್ಲವಾದರೂ ‘ಅವರು’ ಸಿಕ್ಕಿದಾಕ್ಷಣ ಢಂ ಅನಿಸಿಬಿಡಬೇಕೆನ್ನುವಷ್ಟು ಕೋಪ. ಏನು ಮಾಡೋದಕ್ಕೂ ಕಣ್ಣು ಕಾಣ್ತಿಲ್ಲ. ಕಣ್ಣು ರಿಪೇರಿಗಾಗಿ ತಾತ ಮತ್ತು ಮೊಮ್ಮಗ ಕಣ್ಣು ಡಾಕ್ಟರರ ಹತ್ತಿರ ಬಂದಿದ್ದಾರೆ. ಈ ಕಣ್ಣಿನ ಡಾಕ್ಟರೋ ಕವಿ ಮಹಾಶಯ. ಅಕ್ಷರ ಕಲಿತವ.

ಕಣ್ಣು ಚಿಕಿತ್ಸೆಯ ಸುತ್ತ ಸುತ್ತುತ್ತ ಹಾಸ್ಯದ ಲಯದೊಂದಿಗೆ ಆರಂಭವಾಗುವ ಈ ಕಣ್ಕಟ್ಟಿನಾಟ ನಿಧಾನಕ್ಕೆ ಐರನಿಯ ರೂಪು ಪಡೆಯುತ್ತ ಹೋಗುತ್ತದೆ. ಕಣ್ಣು ಕಾಣದ, ಜೊತೆಗೆ ಅಂಧ ದ್ವೇಷವನ್ನೂ ತುಂಬಿಕೊಂಡ, ಯಾವ ಮಸೂರಕ್ಕೂ ನಿಲುಕದ ಈ ತಾತನ ಕಣ್ಣುಗಳಿಗೆ ಈ ಡಾಕ್ಟರು ತನ್ನ ‘ಕನ್ನಡಕ’ ತೊಡಿಸಿಬಿಡುತ್ತಾನೆ. ತಾತ ಕವಿಯೂ ಡಾಕ್ಟರ್ನೂ ಆದ ಈ ಮನುಷ್ಯ ನ ‘ಕಣ್ಣುಗಳಿಂದ ನೋಡತೊಡಗುತ್ತಾನೆ. ಈಗ ಇವನಿಗೆ ‘ಅವರು’ ಸರಿಯಾಗಿಯೇ ಕಾಣುತ್ತಿದ್ದಾರೆ. ‘ ನಾವು’ ಮತ್ತು ‘ಅವರು’ ಈಗ ಸ್ಪಷ್ಟವಾಗಿದೆ. ಆಚೆಗೂ ಹೋಗಬಹುದಾದ, ಈಚೆಗೂ ಹೋಗಬಹುದಾದ ‘ಕವಿ’ ಯಂಥ ಡಾಕ್ಟರ್ ಈಗ ‘ಇವರ’ ಜೊತೆ ಸೇರಿಕೊಂಡುಬಿಟ್ಟಿದ್ದಾನೆ. ಈಗ ಈ ಮೂವರೂ ಸೇರಿ ‘ನಾವು’ ಆಗಿದ್ದಾರೆ. ‘ಅವರು’ ಒಬೊಬ್ಬರಾಗಿ ಕೋವಿಯ ಗುರಿಯಾಗಿದ್ದಾರೆ.

ಈ ‘ ನಾವು, ನಮ್ಮವರು’ ಮತ್ತು ‘ಅವರು’ ಗಳ ಶಬ್ದದಾಟದ ನಡುವೆಯೇ ನಮ್ಮ ನಮ್ಮ ನಡುವಿನ ಗೋಡೆಗಳೂ. ಧರ್ಮ ದ್ವೇಷಗಳೂ ಅಮಾನವೀಯ ಕ್ರೌರ್ಯಗಳೂ ಕಾಣತೊಡಗುತ್ತವೆ. ನಾಟಕದುದ್ದಕ್ಕೂ ಕೋವಿಯೂ, ಕನ್ನಡಕವೂ ಅದ್ಭುತ ರೂಪಕಳಾಗುತ್ತ, ಅಮಾಯಕ ಕಣ್ಣುಗಳಿಗೆ ನಮ್ಮ ನಮ್ಮ ಕಣ್ಣೋಟಗಳನ್ನ ನೀಡುವದರ ಮೂಲಕ ಯೋಚನೆಗಳನ್ನೇ ಕೆಡಿಸುವ, ಸ್ವಚ್ಷ ಮಸೂರಗಳಿಗೆ ಧೂಳು ಮೆತ್ತುವದರ ಮೂಲಕ ಸತ್ಯಗಳನ್ನು ಮರೆಮಾಚುವ ಮತ್ತು ಆ ಮೂಲಕ ಹಿಂಸೆ ಬಿತ್ತುವ ಸುತ್ತಲಿನ ವಿದ್ಯಮಾನಗಳಿಗೆ ನಾಟಕ ಕನ್ನಡಿಯಾಗುತ್ತದೆ.

ಕನ್ನಡಕದ ಫ್ರೇಮುಗಳದ್ದೇ ವಿನ್ಯಾಸದ ರಂಗಸಜ್ಜಿಕೆಯನ್ನು ಜಾಣತನದಿಂದ ವಿನ್ಯಾಸಗೊಳಿಸಿರುವ ವೆಂಕಟೆಶ ಪ್ರಸಾದ್ ಅಷ್ಟೇ ಜಾಣತನದಿಂದ ಅವುಗಳನ್ನು ಬಳಸಿಕೊಳ್ಳುತ್ತಾರೆ. ಗೋಲಾಗಾರದ ರಚನೆಗಳು ತೆರೆದುಕೊಳ್ಳುತ್ತಲೇ ‘ಕನ್ನಡಕ’ ವಾಗುವದರೊಂದಿಗೆ ಮತ್ತೆ ಮತ್ತೆ ನಾಟಕದ ಕೇಂದ್ರಕ್ಕೇ ಎಳೆಯುವ ಜಾದೂ ಮಾಡುತ್ತವೆ. ಕಾರ್ಟೂನ್ ರೀತಿಯ ಚಲನೆಗಳು, ಆಗಾಗ ಥಟ್ಟನೆ ಕಾಣುವ ದೇಹ ಮತ್ತು ಭಾಷೆಯ ಕಸರತ್ತುಗಳು, ‘ ‘ಹೇಳುವದು ಒಂದು:ಮಾಡುವದು ಇನ್ನೊಂದು’ ರೀತಿಯ ಚಲನೆಗಳು. ಇಂಥದೊಂದು ಐರನಿಯನ್ನು ಸಶಕ್ತವಾಗಿ ಕಟ್ಟುವಲ್ಲಿ ನೆರವಾಗಿವೆ.

ಪೋಲಿಷ್ ನಾಟಕಕಾರ ಸ್ಲಾವೋಮೀರ್ ವ್ರಾಜೆಕ್ ನ ‘ಚಾರ್ಲಿ’ ನಾಟಕವನ್ನು ವೆಂಕಟೇಶ ಪ್ರಸಾದ್ ಕನ್ನಡಕ್ಕೆ ತಂದಿದ್ದಾರೆ. ‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ಗಾಗಿ ಈ ನಾಟಕವನ್ನು ಅವರೇ ನಿರ್ದೇಶಿಸಿದ್ದಾರೆ. ನಾಟಕದ ಪಾತ್ರಧಾರಿಗಳು:- ವಿಜಯ್ ಕುಲ್ಕರ್ಣಿ, ರಾಗ್ ಅರಸ್ ಮತ್ತು ಫಣೀಶ್. ಪಿ. ಸಂಗೀತ ಸಂಯೋಜನೆ:- ಉತ್ಥಾನ್ ಭಾರಿಘಾಟ್. ನಿರ್ಮಾಣ, ನಿರ್ವಹಣೆ:- ಅರುಣ್ ಡಿ.ಟಿ., ಸುಷ್ಮ.

ತುಂಬ ವರ್ಷಗಳ ನಂತರ ಹೊನ್ನಾವರದ ಎಸ್.ಡಿ. ಎಂ ಕಾಲೇಜಿನಲ್ಲಿ ಈನಾಟಕ ಪ್ರದರ್ಶಿತವಾಯಿತು. ಎಸ್.ಡಿ.ಎಂ ಪದವಿ ಕಾಲೇಜಿನ ವಿದ್ಯಾರ್ಥಿ ಒಕ್ಕೂಟ ಮತ್ತು ‘ ಚಿಂತನ ರಂಗ ಅಧ್ಯಯನ ಕೇಂದ್ರ’ ಈ ನಾಟಕವನ್ನು ಸಂಘಟಿಸಿದ್ದವು.

-ಕಿರಣ ಭಟ್, ಹೊನ್ನಾವರ
Exit mobile version