Site icon ಒಡನಾಡಿ

ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ; ಜಾತ್ರೆ, ಉತ್ಸವಕ್ಕಿಲ್ಲ ಸಮ್ಮತಿ…!

ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದೆ. ಆದರೆ ಜಾತ್ರೆ, ಹಾಗೂ ಉತ್ಸವ, ಮೆರವಣಿಗೆಗಳಿಗೆ ಸದ್ಯ ಸಮ್ಮತಿಯಿರುವುದಿಲ್ಲ.

ರಾಜ್ಯದಲ್ಲಿ ಜು.19ರಿಂದ ಅನ್ಲಾಕ್ 4.0 ಜಾರಿಯಾಗಿತ್ತು. ನೈಟ್ ಕರ್ಫ್ಯೂವನ್ನು 1 ಗಂಟೆ ಕಡಿತಗೊಳಿಸಲಾಗಿತ್ತು. ಜೊತೆಗೆ ಸಿನಿಮಾ ಥಿಯೇಟರ್ಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು.ಇದೀಗ  ಜು.25ರಿಂದ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಕೋವಿಡ್ ನಿಯಮಗಳ ಕಡ್ಡಾಯ ಪಾಲನೆ ಜೊತೆಗೆ ದೇವಾಲಯ, ಚರ್ಚ್, ಮಸೀದಿಗಳಿಗೆ ಹೋಗಬೇಕಿದೆ. ಸಂಬಂಧಪಟ್ಟ ಇಲಾಖೆಯಿಂದ ಹೊರಡಿಸಲಾದ ಎಸ್ಒಪಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದರೆ ಇನ್ನೂ ಸಹ ಹೆಚ್ಚು ಜನಸಂದಣಿ ಸೇರುವ ಜಾತ್ರೆಗಳು, ದೇವಾಲಯದ ಉತ್ಸವಗಳು, ಮೆರವಣಿಗೆಗಳು, ಸಭೆಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಕೊರೋನಾ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ಬಳಿಕ ಈ ಉತ್ಸವಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಮಧ್ಯೆಯೇ ಮೂರನೇ ಅಲೆ ಭೀತಿ ಶುರುವಾಗಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
 
ರಾಜ್ಯದಲ್ಲಿ ಶುಕ್ರವಾರ 1705 ಕೊರೋನಾ ಪ್ರಕರಣಗಳು  ಪತ್ತೆಯಾಗಿದ್ದು, 30 ಜನರು ಕೊರೋನಾಗೆ ಬಲಿಯಾಗಿದ್ದರು. 2243 ಜನ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು.  ಪಾಸಿಟಿವಿಟಿ ದರ ಶೇ.1.35ರಷ್ಟಿದ್ದರೆ, ಸಾವಿನ ಪ್ರಮಾಣ ಶೇ. 1.75 ರಷ್ಟಿತ್ತು.

ಅನ್ಲಾಕ್ 4.0 ದಲ್ಲಿ ಸಿನಿಮಾ ಥಿಯೇಟರ್ ಗಳನ್ನು ಶೇ.50ರಷ್ಟು ಆಸನ ಭರ್ತಿಯೊಂದಿಗೆ ಆಗಸ್ಟ್ 2ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ನೈಟ್ ಕರ್ಫ್ಯೂವನ್ನು ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ಕಡಿತಗೊಳಿಸಲಾಗಿದೆ. ಜೊತೆಗೆ ಪದವಿ ಕಾಲೇಜುಗಳನ್ನು ಜು.26ರಿಂದ ಪ್ರಾರಂಭಿಸಲು ಅವಕಾಶ ಅವಕಾಶ ನೀಡಲಾಗಿದೆ. ಕೊರೋನಾ ಮೊದಲ ಡೋಸ್ ಪಡೆದ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಹಾಗೂ ಅಧ್ಯಾಪಕೇತರ ವರ್ಗ ಮಾತ್ರ ಕಾಲೇಜಿಗೆ ಬರಲು ಅನುಮತಿ ನೀಡಲಾಗಿದೆ. ಆದರೆ ಇನ್ನೂ ಮಹಾನಗರಗಳಲ್ಲಿ  ಪಬ್ ಗಳಳನ್ನು ತೆರೆಯಲು ಅವಕಾಶ ನೀಡಿಲ್ಲ. ಇಂದಿನಿಂದ ಅಮ್ಯೂಸ್ಮೆಂಟ್ ಪಾರ್ಕ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಕಡ್ಡಾಯ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. 

Exit mobile version