Site icon ಒಡನಾಡಿ

ಲಿಂಗೈಖ್ಯರಾದ ಹಳಿಯಾಳದ ಆಧ್ಯಾತ್ಮ ಚಿಂತಕ ಎಮ್. ಎನ್. ತಳವಾರ : ಕೊರೊನಾಕ್ಕೆ ಪ್ರಾಣತೆತ್ತ ಶರಣ…

ಹಳಿಯಾಳ: ತಾಲೂಕಿನ ಆದ್ಯಾತ್ಮ ಚಿಂತಕರೆಂದೇ ಪರಿಚಿತರಾಗಿರುವ ಎಮ್.ಎನ್. ತಳವಾರವರು ಶನಿವಾರ ರಾತ್ರಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗಖ್ಯರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೂಲತಹ ಧಾರವಾಡದ ಉಪ್ಪಿನ ಬೆಳಗಾವಿಯವರಾಗಿದ್ದ ಮಾರುತಿ ನಿಂಗಪ್ಪ ತಳವಾರವರು ತಮ್ಮ ವೃತ್ತಿ ಬದುಕಿಗಾಗಿ ಹಳಿಯಾಳಕ್ಕೆ ಬಂದು ಇಲ್ಲಿಯೇ ನೆಲೆ ಕಂಡುಕೊಂಡವರು. ವೃತ್ತಿಯಲ್ಲಿ ಅಭಿಯಂತರರಾಗಿದ್ದರೂ (ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ) ಶರಣ ಚಿಂತನೆ ಹಾಗೂ ಆಧ್ಯಾತ್ಮದಲ್ಲಿ ಒಲುಮೆಯ ಬದುಕು ಕಂಡುಕೊಂಡವರು.

ಸರಕಾರಿ ಸೇವಾ ನಿವೃತ್ತಿಯ ನಂತರ ಸಂಪೂರ್ಣವಾಗಿ ಆಧ್ಯಾತ್ಮ ಮತ್ತು ಶರಣತ್ವದ ಅಸಚರಣೆಿಯನ್ನೇ ಮೈಗೂಡಿಸಿಕೊಂಡಿದ್ದ ಇವರು ಹಲವಾರು ಉಪನ್ಯಾಸಗಳನ್ನು ನೀಡಿದವರು. ಹಳಿಯಾಳದ ಹಿರಿಯರಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ತಳವಾರವರು ಶರಣ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು. ಹಲವಾರು ಸನ್ಮಾನ ಗೌರವಗಳಿಗೂ ಭಾಜನರಾದವರು.

ಕೆಲ ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮೃತರು ಮಡದಿ ಹಾಗೂ ಮೂವರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ: ಎಮ್. ಎನ್. ತಳವಾರ ಅವರ ನಿಧನಕ್ಕೆ ಶಾಸಕ ಆರ್.ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್, ಮಾಜಿ ಶಾಸಕ ಸುನೀಲ ಹೆಗಡೆ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವು ದೇಸಾಯಿಸ್ವಾಮಿ, ಬಸವ ಕೇಂದ್ರದ ಚಂದ್ರಕಾಂತ ಅಂಗಡಿ, ಸುಮಂಗಲಾ ಅಂಗಡಿ, ಉಪನ್ಯಾಸಕ ಮಲ್ಲಾಪುರಮಠ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಯ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಮನ: ನಾನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಿದ್ದ ಸಂದರ್ಭದಲ್ಲಿ ಹಳಿಯಾಳದ ಮುರ್ಕವಾಡ (ಕೆ.ಕೆ. ಹಳ್ಳಿ) ಯಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿಯೂ ಎಮ್.ಎನ್. ತಳವಾರವರು ಕಾರ್ಯ ನಿರ್ವಹಿಸಿದ್ದನ್ನು ಹಾಗೂ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ್ದನ್ನು ಸ್ಮರಿಸಿಕಳ್ಳುವೆ. ಜೊತೆಗೆ ದಾಂಡೇಲಿಯಲ್ಲಿ ನಡೆದಿದ್ಹಿದ ಶತಮಾನೋತ್ಸವ ಸಂಭ್ರಮದ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದ್ದೂ ಕೂಡಾ ಅಭಿಮಾನವೇ ಸರಿ. ಅಗಲಿದ ಈ ಸಾಹಿತ್ಯ ಪ್ರೇಮಿಗೆ… ಸಹೃದಯಿಗೆ ಒಡನಾಡಿ ಬಳಗದಿಂದ ನುಡಿನಮನಗಳು.

Exit mobile version