Site icon ಒಡನಾಡಿ

ಕೊರೊನಾ ಕಾಲದಲ್ಲಿ ತೆರೆಯ ಮರೆಯಲ್ಲುಳಿದ ಪೌರ ಸಿಬ್ಬಂದಿಗಳು

ಕ್ವಾರೆಂಟೈನ್‌ ಕಟ್ಟಡಕ್ಕೆ ಔಷಧಿ ಸಿಂಪಡಿಸುತ್ತಿರುವ ಪೌರ ಸಿಬ್ಬಂದಿಗಳು

“ನಾವೂ ಕೂಡಾ ಕೊರೊನಾ ಸೋಂಕು ನಿಯಂತ್ರಿಸಲು ನಮ್ಮ ಮನೆ ಮಠ ಬಿಟ್ಟು ಕೆಲಸ ಮಾಡಿದ್ದೇವೆ. ಆದರೆ ಯಾಕೋ ಗೊತ್ತಿಲ್ಲ. ಯಾರೂ ಸಹ ನಮ್ಮನ್ನು ಕೊರೊನಾ ವಾರಿಯರ್ಸ ಎಂದು ಗುರುತಿಸುವುದೇ ಇಲ್ಲ. ಈ ನೋವು ನಮಗಿದೆ” ಇದು ಪೌರ ಸಿಬ್ಬಂದಿಗಳ ನೋವಿನ ನುಡಿಯಾಗಿದೆ.


ಕೊವಿಡ್ 19 ಎಂಬ ಮಾರಕ ರೋಗಾಣುವಿನಿಂದ ಇಡೀ ವಿಶ್ವವೇ ತತ್ತರಿಸಿದ್ದು ಒಂದು ಕಡೆಯಾದರೆ ಈ ರೋಗವನ್ನು ತಡೆಗಟ್ಟುವಲ್ಲಿ ಶ್ರಮಿಸಿದ ಕೈಗಳ ಸಾಹಸ ಮತ್ತೊಂದು ಕಡೆ. ಅವರಲ್ಲಿ ವೈದ್ಯರು, ಶುಶ್ರೂಶಕಿಯರು, ಅಂಗನವಾಡಿ ಆಸಾ ಕಾರ್ಯಕರ್ತೆಯರು, ಪೊಲೀಸರು… ಹೀಗೆ ಹಲವಾರು ಜನರು ಸೇರುತ್ತಾರೆ. ಇವರನ್ನು ಕೊರೊನಾ ವಾರಿಯರ್ಸಗಳೆಂದೇ ಬಿಂಬಿಸಲಾಗಿದೆ. ಗೌರವಿಸಲಾಗಿದೆ. ಅದ ಸಕಾಲಿಕವೂ ಹೌದು. ಕೊರೊನಾ ಸೋಂಕಿತರನ್ನ, ಶಂಕಿತರನ್ನು ರಕ್ಷಿಸಲು ತಮ್ಮ ಪ್ರಾಣ ಬದಿಗಿಟ್ಟು, ತಮ್ಮ ಮನೆ ಮಕ್ಕಳ ಸುಖವನ್ನು ಬದಿಗಿಟ್ಟು ಹೋರಾಡಿದವರಿಗೆ ನಿಜವಾಗಲು ಒಂದು ಸಲಾಂ ಇದ್ದೇ ಇದೆ.

ಆದರೆ ಇವರೆಲ್ಲರ ನಡುವೆ ಇನ್ನೂ ಹಲವಾರು ಜನರು ಕೊರೊನಾ ವಿರುದ್ದ ಹೋರಾಡಿ ತೆರೆಯ ಮರೆಯಲ್ಲೇ ಉಳಿದವರಿದ್ದಾರೆ. ಅವರಲ್ಲಿ ಪೌರ ಸಿಬ್ಬಂದಿಗಳು ಪ್ರಮುಖರು. ಭಾಗಶಹ ನಗರ ಪ್ರದೇಶಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಅಲ್ಲಿಯ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು ಇದರ ವಿರುದ್ದ ಹೋರಾಟ ನಡೆಸಿದ್ದು ಭಾಗಶಹ ಬೆಳಕಿಗೆ ಬಂದಿಲ್ಲ. ಅವರೆಲ್ಲರೂ ಅದು ತಮ್ಮ ಕರ್ತವ್ಯ ಎಂಬಂತೆ ಕೆಲಸ ಮಾಡಿದರಾದರೂ ಸಹ ಅವರದ್ದೂ ಕೂಡಾ ವಾರಿಯರ್ಸ ಯಾದಿಗೆ ಸೇರಿಬೇಕಿತ್ತು.

ಶೌಚಾಲಯ ಸ್ವಚ್ಚಗೊಳಿಸುತ್ತಿರುವ ಪೌರ ಕಾರ್ಮಿಕ

ಒಂದು ನಿದರ್ಶನಕ್ಕೆ ಹೇಳೋಣವೆಂದರೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ, ಗ್ರಾಮ ಪಂಚಾಯತಗಳಲ್ಲಿಯೂ ಹಲವು ಸಿಬ್ಬಂದಿಗಳನ್ನು ಪ್ರತೀ ವಾರ್ಡು ವಾರ್ಡಿಗೆ ನೊಡೆಲ್ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಅವರೆಲ್ಲರೋ ಕೊರೊನಾ ಭೀತಿಯಲ್ಲಿಯೇ ತಮ್ಮ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಜನರಿಗೆ ಸ್ಪಂದಿಸಿದ್ದಾರೆ. ಕೊರೊನಾ ಸೋಂಕಿತರ ಸಂಪರ್ಕದಲ್ಲಿದವರನ್ನು ಹಾಗೂ ಹೊರ ರಾಜ್ಯದಿಂದ ಬಂದವರನ್ನು ಸಾಂಸ್ಥಿಕ ಕ್ವಾರೆಂಟೈನ್‍ನಲ್ಲಿ ಇಡಲಾಗಿತ್ತು. ಆ ಸಾಂಸ್ಥಿ ಕ್ವಾರೆಂಟೈನ್ ಕಾಯುವ ಕೆಲಸ ನೊಡೆಲ್ ಅಧಿಕಾರಿಗಳಾಗಿದ್ದ ನಗರಸಭೆ ಸಿಬ್ಬಂದಿಗಳಾಗಿತ್ತು. ಹಗಲು, ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸಿದ್ದಾರೆ ಇವರು. ಕ್ವಾರೆಂಟೈನ್ ಇದ್ದವರ ಕಕ್ಕಸ ತೊಳೆದಿದ್ದಾರೆ. ಬೇಕು ಬೇಡಿಕೆ ಈಡೇರಿಸಿದ್ದಾರೆ. ಕ್ವಾರೆಂಟೈನ್ ಆದವರಿಗೆ ಸ್ವತಃ ತಾವೇ ಊಟ ಉಪಹಾರ ಬಡಿಸಿದ್ದಾರೆ. ಈಗಲೂ ಅದೇ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಮಾತ್ರ ಅದ್ಯಾಕೋ ಕೊರೊನ ವಾರಿಯರ್ಸ ಯಾದಿಯಲ್ಲಿ ಪ್ರಚಾರಕ್ಕೆ ಬಾರದಿರುವುದು ಹಾಗೂ ಇವರ ಜೊತೆ ಕೊರೆಂಟೈನ್ ಹಾಗೂ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರೂ ಕೂಡಾ ಬೆಳಕಿಗೆ ಬಾರದಿರುವುದು ವಿಪರ್ಯಾಸವೆನ್ನಬಹುದಾಗಿದೆ. ಸರಕಾರ ಇವರ ಕಾಯವನ್ನು ಗುರುತಿಸಲೇ ಬೇಕಾಗಿದೆ.

Exit mobile version