ವೃದ್ದೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಲು ಹೋದ ವೇಳೆ ಅರೋಪಿ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದ ಸಂದರ್ಭದಲ್ಲಿ ಪೊಲಿಸರು ಅರೋಪಿಯ ಮೇಲೇ ಗುಂಡಿನ ದಾಳಿ ನಡೆಸಿ, ಬಂಧಿಸಿದ ಘಟನೆ ದಾಂಡೇಲಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಆರೋಪಿ ಫೈರೋಜ ಯಾಸಿನ ಯರಗಟ್ಟಿ ಪೋಲೀಸರ ಮೇಲೆ ಹಲ್ಲೆ ಮಾಡಿದ ಸಂದರ್ಭದಲ್ಲಿ ಆರೋಪಿಯ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆದಿದೆ. ಆರೋಪಿಯ ಎಡಗಾಲಿಗೆ ಗುಂಡೇಟು ತಗುಲಿದೆ. ಘಟನೆಯಲ್ಲಿ ಪಿ.ಎಸ್.ಐ. ಕಿರಣ ಪಾಟೀಲ ಹಾಗೂ ಪೊಲಿಸ್ ಸಿಬ್ಬಂದಿ ಕೃಷ್ಣ ಹಾಗೂ ಇಮ್ರಾನ್ ಎಂಬವರಿಗೂ ಗಾಯವಾಗಿದೆ. ಗಾಯಗೊಂಡವರು ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನ 12 ರಂದು ದಾಂಡೇಲಿಯ ಬೈಲಪಾರನಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ ನಡೆದಿತ್ತು. ಆರೋಪಿ ಫೈರೋಜ ಯರಗಟ್ಟಿ (25) ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಮೂರು ತಂಡ ರಚಿಸಿ ಬಲೆಬೀಸಿದ್ದರು.
ಶನಿವಾರ ಆರೋಪಿಯ ಬಂಧನಕ್ಕಾಗಿ ಪಿ.ಎಸ್.ಐ. ಕಿರಣ ಪಾಟೀಲ ಸಿಬ್ಬಂದಿಗಳ ಜೊತೆ ಕುಳಗಿ ರಸ್ತೆಯಲ್ಲಿ ದಾಳಿ ನಡೆಸಿದ್ದರು. ಬಂಧನ ಕಾರ್ಯಾಚರಣೆಯ ವೇಳೆ ಆರೋಪಿ ಫೈರೋಜ್ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಮೊದಲು ಚಾಕುವಿನಿಂದ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣ ಮತ್ತು ಇಮ್ರಾನ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಪಿಎಸ್ಐ ಕಿರಣ ಪಾಟೀಲ್ ಅವರು ಆರೋಪಿಗೆ ಶರಣಾಗುವಂತೆ ಹೇಳಲು ಹೋದಾಗ ಆರೋಪಿ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾನೆ. ಅಸಗ ಪಿ.ಎಸ್.ಐ. ಕಿರಣ ಪಾಟೀಲ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಆರೋಪಿಗೆ ಎಚ್ಚರಿಕೆ ನೀಡಿದ್ದಾರೆ. ಆಗಲೂ ಶರಣಾಗದ ಆರೋಪಿ ಫೈರೋಜ ಚಾಕುವಿನಿಂದ ಕಿರಣ ಪಾಟೀಲ ಅವರ ಕೈ ಹಾಗೂ ಗುತ್ತಿಗೆ ಭಾಗದಲ್ಲಿ ಗಾಯಗೊಳಿಸಿದ್ದಾನೆ . ಆಗ ಪಿ.ಎಸ್.ಐ. ಕಿರಣ ಪಾಟೀಲ ಜೀವ ರಕ್ಷಣೆಗಾಗಿ ಅರೋಪಿಯ ಎಡಗಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯ ವೇಳೆ ಗಾಯಗೊಂಡ ಪಿಎಸ್ಐ ಕಿರಣ ಪಾಟೀಲ್, ಪೊಲೀಸ್ ಸಿಬ್ಬಂದಿಗಳಾದ ಕೃಷ್ಣ ಮತ್ತು ಇಮ್ರಾನ್ ಅವರನ್ನು ಹಾಗೂ ಆರೋಪಿ ಫೈರೋಜ ಯರಗಟ್ಟಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಕುರಿತಂತೆ ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಎಮ್. ನಾರಾಯಣರವರು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಾಹಿತಿ ನೀಡಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ, ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಜೈಪಾಲ್ ಪಾಟೀಲ ಹಾಗೂ ದಾಂಡೇಲಿ ಪೊಲೀಸ್ ವಿಭಾಗದ ಭೇಟಿ ನೀಡಿದ್ದಾರೆ.
ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿದ ಎಸ್.ಪಿ :
ಘಟನೆಯಲ್ಲಿ ಗಾಯಗೊಂಡ ಪಿ.ಎಸ್.ಐ. ಕಿರಣ ಪಾಟೀಲ, ಹಾಗೂ ಕಾನಸ್ಟೇಬಲ್ ಗಳಾದ ಕೃಷ್ಣ ಮತ್ತು ಇಮ್ರಾನ ಅವರ ಆರೋಗ್ಯವನ್ನು ಎಸ್.ಪಿ. ನಾರಾಯಣ ವಿಚಾರಿಸಿದರು. ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಅವರಿಂದ ಮಾಹಿತಿ ಪಡೆದ ಎಸ್.ಪಿ. ಕಾರ್ಯಾಚರಣೆಯ ಬಗ್ಗೆ ಬೆನ್ನು ತಟ್ಟಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಿಬ್ಬಂದಿಗಳಿಗೆ ನಿರ್ದೇಶಿಸಿದರು. ಇದೇ ವೇಳೆ ಅರೋಪಿ ಫೈರೋಜ ಯರಗಟ್ಟಿಯನ್ನೂ ಕೂಡಾ ವಿಚಾರಿಸಿ ವೃದ್ದೆಯ ಮೇಲೆ ಅತ್ಯಾಚಾರ ಗೈದ ಬಗ್ಗೆ ಛೀಮಾರಿ ಹಾಕಿದರಲ್ಲದೇ, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಕ್ಕೆ ತರಾಟೆಗೆ ತೆಗೆದುಕೊಂಡರು.
ಪೊಲೀಸ್ ಕಾರ್ಯಕ್ಕೆ ಎಸ್.ಪಿ. ಶ್ಲಾಗನೆ:
ವೃದ್ಧೆಯ ಅತ್ಯಾಚಾರ ನಡೆದ 24 ಗಂಟೆಯ ಒಳಗಡೆ ದಾಂಡೇಲಿಯ ಪೊಲಿಸರು ಆರೋಪಿಯನ್ನು ಬಂಧಿಸಿದ್ದು, ಈ ಕಾರ್ಯಾಚಾರಣೆಯಲ್ಲಿ ತೊಡಗಿಸಿಕೊಂಡ ಡಿ.ವೈ.ಎಸ್.ಪಿ. ಶಿವಾನಂದ ಮದರಕಂಡಿ, ಸಿ.ಪಿ.ಐ. ಜಯಪಾಲ ಪಾಟೀಲ, ಪಿ.ಎಸ್.ಐ.ಗಳಾದ ಅಮೀನ ಅತ್ತಾರ ಹಾಗೂ ಕಿರಣ ಪಾಟೀಲ ಅವರ ಸಾಹಸಕ್ಕೆ ಎಸ್.ಪಿ. ನಾರಾಯಣ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.