Site icon ಒಡನಾಡಿ

‘ಉದ್ಯಮಿ ರತ್ನ’ ಪ್ರಶಸ್ತಿ ಪುರಸ್ಕೃತ ಮಂಜುನಾಥ್ ಭಟ್ ರವರಿಗೆ ಅವರ ಮನೆಂಗಳದಲ್ಲಿ ಸನ್ಮಾನ

ಸಮಾಜಕ್ಕೆ ತನ್ನಿಂದ ಏನನ್ನಾದರೂ ಕೊಡಬೇಕು ಎನ್ನುವ ತುಡಿತವೇ ಮಂಜುನಾಥ ಭಟ್ಟರವರ ಸಾಧನೆಯ ಮೊದಲ ಮೆಟ್ಟಿಲೆಂದು ನಿವೃತ್ತ ಪ್ರಾಚಾರ್ಯ ಡಾ.ಡಿ.ಡಿ. ಭಟ್ ಹೇಳಿದರು.

ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಆಶ್ರಯದಲ್ಲಿ ನಡೆದ ಉದ್ಯಮಿ ರತ್ನ ಪ್ರಶಸ್ತಿ ಪುರಸ್ಕೃತ ಮಂಜುನಾಥ ಭಟ್ ರವರನ್ನು ಸುವರ್ಣಗದ್ದೆಯ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಮಾತನಾಡಿದರು. ಕಷ್ಟಕಾಲದಲ್ಲಿ ಕುಗ್ಗಲಿಲ್ಲ,ಸಿರಿತನ ಬಂದಾಗ ಹಿಗ್ಗಲಿಲ್ಲ, ಈ ಸಮಚಿತ್ತ ಭಾವನೆಯ ಅಪರೂಪದ ವ್ಯಕ್ತಿತ್ವಕ್ಕೆ ಪ್ರಶಸ್ತಿ ಅವರನ್ನರಸಿ ಬಂದಿದೆ.ಓರ್ವ ಸಾಧಕನ ಹಿಂದೆ ಕಠಿಣ ಪರಿಶ್ರಮವಿರುತ್ತದೆ. ಶ್ರಮ ಸಂಸ್ಕೃತಿಯ ಜೊತೆಗೆ ಇತರರನ್ನು ಗೌರವಿಸುವ ಉದಾರ ಗುಣ ಸಂಪನ್ನ ಮಂಜುನಾಥ್ ಭಟ್ ರವರಿಗೆ ಈ ಪ್ರಶಸ್ತಿ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರನ್ನು ಅಭಿನಂದಿಸಿ ಮಾತನಾಡಿದರು.

ದೇವಗಿರಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಎಸ್. ಟಿ. ನಾಯ್ಕ ಮಾತನಾಡಿ, ಮಂಜುನಾಥ ಭಟ್ ರವರಿಗೆ ಉದ್ಯಮಿ ರತ್ನ ಪ್ರಶಸ್ತಿ ಬಂದಿರುವುದು ಇಡೀ ನಮ್ಮ ಪಂಚಾಯತಿಗೆ ಹೆಮ್ಮೆ ತಂದಿದೆ. ಹೊಳೆಗದ್ದೆ ಹಾಗೂ ಸುತ್ತಮುತ್ತಲಿನ ಹಲವು ಕುಟುಂಬದ ಜನರಿಗೆ ಉದ್ಯೋಗ ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬರಲಿ ಎಂದರು.

ಪ್ರಶಸ್ತಿ ಪುರಸ್ಕೃತ ಸ್ವರ್ಣ ಲೆಟೆಕ್ಸ್ ಮಾಲೀಕ ಮಂಜುನಾಥ್ ಭಟ್ ಮಾತನಾಡಿ, ಊರಿನವರಿಂದ ಪಡೆದ ಪ್ರಶಸ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಪ್ರಶಸ್ತಿಯನ್ನು ನನ್ನ ಕಂಪನಿಯ ಎಲ್ಲಾ ನೌಕರರಿಗೆ ಅರ್ಪಿಸುತ್ತೇನೆ. ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಪರಿಹರಿಸುವ ಎದೆಗಾರಿಕೆಯೊಂದಿಗೆ ಮುನ್ನಡೆದಾಗ ಮಾತ್ರ ನಮ್ಮ ಗುರಿ ಮುಟ್ಟಿ ನಾವು ಬಯಸಿದ್ದನ್ನು ಪಡೆಯಬಹುದು. ಪ್ರೀತಿ ವಿಶ್ವಾಸದಿಂದ ಇಟ್ಟ ಹೆಜ್ಜೆ ಬದುಕಿನ ದಿಕ್ಕನೆ ಬದಲಾಯಿಸಲು ಸಾಧ್ಯ ಎಂದರು.

ನಾಗಮ್ಮ ಪ್ರಕಾಶನ ಸಂಸ್ಥಾಪಕ ಪಿ.ಆರ್. ನಾಯ್ಕ ಮಾತನಾಡಿ, ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿಗೆ ಉದ್ಯಮಿ ರತ್ನ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಉದ್ಯಮಿಯಾದವರು ಇತರರ ಕಷ್ಟಕ್ಕೆ ನೆರವಾಗುವ ಅಪರೂಪದ “ಸ್ವರ್ಣ ಲೆಟಕ್ಸ್” ಕಂಪನಿ ಇತರರಿಗೆ ಮಾದರಿ ಎಂದರು.

ಯುವಜನ ಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ ಮಾತನಾಡಿ, ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ಸಾಧನೆ ಮಾಡಿದ ವ್ಯಕ್ತಿಯನ್ನಾಗಲಿ ಅಥವಾ ಸಂಸ್ಥೆಯನ್ನಾಗಲಿ ಗೌರವಿಸುವಲ್ಲಿ “ನಾಗಮ್ಮ ಪ್ರಕಾಶನ” ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಎಂದು ಪ್ರಕಾಶಕರ ಕುರಿತು ಶ್ಲಾಘನೀಯ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಮಂಜುನಾಥ ಭಟ್ ರವರ ಮಾತೊಶ್ರೀ ಮಾದೇವಿ ಭಟ್ಟ, ಪತ್ನಿ ವಿದ್ಯಾಭಟ್ಟ,ಕುಮಾರ ಗಜಾನನ ಭಟ್ಟ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ ಸದಸ್ಯರಾದ ದೇವೇಂದ್ರ ಶೇರುಗಾರ, ಪಾಂಡು ಪಟಗಾರ, ಉದ್ದಿಮೆದಾರ ಸಚಿನ ನಾಯ್ಕ, ಮಾಜಿ ಗ್ರಾಮ ಪಂಚಾಯತ ಸದಸ್ಯ ಸುರೇಶ ಹರಿಕಾಂತ, ಜೆ.ಕೆ. ನಾಯ್ಕ, ಜನಾರ್ಧನ ಹರ್ನಿರು, ಸುಬ್ರಾಯ ಶಾನಭಾಗ, ಮಹೇಶ ನಾಯ್ಕ ಮುಂತಾದವರು ಮಂಜುನಾಥ ಭಟ್ ರವರ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.

ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಗೋಪಾಲ ಮಡಿವಾಳ, ಉದ್ಯಮಿ ಜಗದೀಶ ಡಿ. ಭಂಡಾರಿ,ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರಾದ ಕೇಶವ ಮಡಿವಾಳ, ಹಿರಿಯರಾದ ಗೋಪಾಲ ಹೆಗಡೆ, ನಾರಾಯಣ ಪ್ರಭು, ಅಶೋಕ ನಾಯ್ಕ, ಮಾಜಿ ಗ್ರಾಮ ಪಂಚಾಯತ ಸದಸ್ಯ ರಾಜು ನಾಯ್ಕ,ಕೊಂಕಣ ರೈಲ್ವೆಯ ಅಧಿಕಾರಿ ಮಂಜುನಾಥ ಗೌಡ ಮುಂತಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಯುವಜನ ಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ ಸ್ವಾಗತಿಸಿದರೆ,ಶಿಕ್ಷಕ ಸಂಘದ ಪ್ರತಿನಿಧಿ ಸುರೇಶ ನಾಯ್ಕ ನಿರೂಪಿಸಿ, ಸರ್ವರನ್ನು ವಂದಿಸಿದರು.

ವಿಡಿಯೋ ತುಣುಕು….

Exit mobile version