ದಾಂಡೇಲಿ : ಮಹಾತ್ಮ ಗಾಂಧೀಜಿಯವರು ಈ ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನದ ಲಾಭ ಈ ದೇಶದ ಜೊತೆಗೆ ನಮ್ಮ ನಿಮ್ಮೆಲ್ಲರಿಗೂ ಆಗಿದೆ. ಗಾಂಧೀಜಿ ವಿಚಾರ ಹಾಗೂ ಅದರ್ಶಗಳು ವಿಶ್ವ ಮಾನ್ಯವಾದುದು. ಅವರ ವಿಚಾರವನ್ನು ಯಾರೂ ಮರೆಯಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ನುಡಿದರು.
ಅವರು ಗಾಂಧಿ ಅಧ್ಯಕ್ಷತೆಯ ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ದಾಂಡೇಲಿಯ ಕಾರ್ಮಿಕ ಭವನದಲ್ಲಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ಗಾಂಧಿ ಭಾರತ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನಾವು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಂಪನ್ನವಾಗಿದ್ದೇವೆ. ಆದರೆ ನೈತಿಕವಾಗಿ ಕುಸಿದಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದ ದೇಶಪಾಂಡೆ ಗಾಂಧೀಜಿಯವರ ನಡೆಯಂತೆ ನಾಚೂ ಸಹ ಅಂಹಿಸಾ ತತ್ವ, ಸಮತೆ, ಪ್ರೀತಿ, ವಿಶ್ವಾಸದಿಂದ ಬಾಳಬೇಕು. ಶಿಕ್ಷಣ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಪರಿಶಿಷ್ಟರ ಕೇರಿಗೆ ಹೋಗಿ ಮಲ ಸ್ವಚ್ಚ ಮಾಡಿದಂತಹ ಗಾಂಧೀಜಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಜೊತೆಗೆ ಸಾಮಾಜಿಕ ಕ್ರಾಂತಿಗೂ ಮುಂದಾಗಿದ್ದರು. ಗ್ರಾಮ ಸ್ವರಾಜ್ಯ ಹಾಗೂ ಅಧಿಕಾರದ ವಿಕೇಂದ್ರೀಕರಣದ ಕನಸು ಕಂಡಿದ್ದರು ಎಂದರು.
ಈ ದೇಶದ ಎರಡನೆಯ ಪ್ರಧಾನ ಮಂತ್ರಿಯಾಗಿದ್ದ ಲಾಲ ಬಹದ್ದೂರ ಶಾಸ್ತ್ರೀ ಶಾಸ್ತ್ರಿ ಸ್ವಾತಂತ್ರ್ಯ ಹೋರಾಟಗಾರಾಗಿಯೂ ಗಮನಸೆಳೆದಿದ್ದರು. ಅವರ ಮೂರ್ತಿ ಚಿಕ್ಕದಿದ್ದರೂ ಕೀರ್ತಿ ದೊಡ್ಡದಿತ್ತು. ಸಜ್ಜನರಾಗಿದ್ದ ಶಾಸ್ತ್ರೀಜೀ ಜೈ ಜವಾನ ಜೈ ಕಿಸಾನ ಎಂಬ ಘೋಷ ವಾಖ್ಯವನ್ನು ದೇಶಕ್ಕೆ ನೀಡಿದ್ದರು ಎಂದರು.
ಲಾಲವಹದ್ದೂರ ಶಾಸ್ತ್ರೀ ಒಮ್ಮೆ ಹಳಿಯಾಳಕ್ಕೆ ಬಂದಿದ್ದನ್ನು, ತಮ್ಮ ಮನೆಗೆ ಬಂದು ಹೋದಾಗ ತಾಚು ಚಿಕ್ಕವರಿದ್ದು ಅವರನ್ನು ಹತ್ತಿರದಿಂದ ಕಂಡಿದ್ದನ್ನು ಸ್ಮರಿಸಿದ ದೇಶಪಾಂಡೆ ಈ ದೇಶದ ಮಹನೀಯರ ಅದರ್ಶಗಳು ನಮಗೆಲ್ಲರಿಗೂ ದಾರಿದೀಪ ವಾಗಿರಬೇಕೆಂದರು.
ಕಾರ್ಯಕ್ರಮದಲ್ಲಿ ನಗರ ಸಭಾ ಅಧ್ಯಕ್ಷ ಅಷ್ಪಾಕ್ ಶೇಖ್ , ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸ್ಥಾಯಿ ಸಮಿತಿಯ ಅಧ್ಯಕ್ಷೆ, ಸುಧಾ ಜಾಧವ್ ಹಾಗೂ ನಗರಸಭಾ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಎಸ್.ಎಸ್. ಪೂಜಾರ ವಂದಿಸಿದರು. ಕೀರ್ತಿ ಗಾಂವಕರ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ದಾಂಡೇಲಿಯ ಮಹಾತ್ಮಾ ಗಾಂಧಿ, ಬಸವೇಶ್ಚರ, ಡಾ. ಅಂಬೇಡ್ಜರ ಹಾಗೂ ಶಿವಾಜಿ ಪುತ್ಥಳಿಗಳಿಗೆ ಹಾರಾರ್ಪಣೆ ಮಾಡಿದರು.
ಅಧಿಕಾರ ಕ್ಷಣಿಕ
ಅಧಿಕಾರ ಕ್ಷಣಿಕ. ಜೀವನವೂ ಕ್ಷಣಿಕ. ಯಾವ ಸಂದರ್ಭದಲ್ಲಿ ಏನಾಗಬಹುದೆಂದು ಹೇಳಲಾಗದು. ಅಧಿಕಾರದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬಾರದು. ಬರೋದಿದ್ರೆ ಅದು ಮನೆತನಕ ಬರ್ತದೆ. ಹೋಗೊದಿದ್ದರೆ ಹೇಳದೇ ಹೋಗುತ್ತದೆ. ನಾನು ಎಲ್ಲವನ್ನೂ ಅನುಭವಿಸಿದ್ದೇನೆ.
– ಆರ್.ವಿ. ದೇಶಪಾಂಡೆ, ಶಾಸಕರು