Site icon ಒಡನಾಡಿ

ಪಾರಂಪಾರಿಕ ಕಲೆಗಳು ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುತ್ತವೆ- ಜಯಕುಮಾರ್ ನಾಯಕ್

ದಾಂಡೇಲಿ: ಭಾರತ ವಿವಿಧ ಕಲೆ ಸಂಸ್ಕೃತಿಗಳ ಸಂಗಮವಾಗಿದೆ. ಇಲ್ಲಿ ನೂರಾರು ವೈವಿಧ್ಯತೆಯ ಕಲೆಗಳಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪಾರಂಪರಿಕ ಕಲೆಗಳು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುತ್ತವೆ ಎಂದು ಹರ್ಬಲ್ ಲೈಫ್ ಉತ್ತರ ಕರ್ನಾಟಕದ ಮುಖ್ಯಸ್ಥ ಜಯಕುಮಾರ್ ನಾಯಕ್ ಹೇಳಿದರು.

ಅವರು ಜೋಯಿಡಾದ ಗಣೇಶಗುಡಿ ಖಾಸಗಿ ರೆಸಾರ್ಟ ಒಂದರಲ್ಲಿ ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಹಮ್ಮಿಕೊಂಡ ‘ಶ್ರಾವಣ ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊಂಗಿರಣ ಸಂಸ್ಥೆಯ ಅಧ್ಯಕ್ಷೆ ಸುಜಾತ ಬಿರಾದರ್ ಮಾತನಾಡಿ ಹೊಂಗಿರಣ ಸಂಸ್ಥೆಯು ಅನೇಕ ವರ್ಷಗಳಿಂದ ಕಲೆ, ಸಾಹಿತ್ಯ, ಸಂಗೀತ’ ಸಂಸ್ಕೃತಿಯ ಸಂರಕ್ಷಣೆಯನ್ನು ಮಾಡುತ್ತ ಬಂದಿದೆ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರದರ್ಶನಗಳನ್ನು ನೀಡುತ್ತ ಬಂದಿದೆ. ಆ ನಿಟ್ಟಿನಲ್ಲಿ ಇಂದು ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ “ಶ್ರಾವಣ ಸಾಂಸ್ಕೃತಿಕ ಸಂಜೆ” ಕಾರ್ಯಕ್ರಮ ಆಯೋಜನಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಗ್ಗಾವಿಯ ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ಬಯಲಾಟದ ವರ್ಣ ವಿನ್ಯಾಸಕಾರ ಶಂಕ್ರಣ್ಣ ಅರ್ಕಸಾಲಿ, ನಿವೃತ್ತ ಶಿಕ್ಷಕ ಹಣಮಂತ ಹಳಿಂಗಳಿ, ಮಿಲೇನಿಯರ್ ರಾಜು ಲಕ್ಷಾನಟ್ಟಿ, ಏರೋನ್ ವರ್ಥ್ , ರತನ್ ಹಾಗೂ ಅರ್ಚನಾ ಹಾಗೂ ನಿಸರ್ಗ ಆರೋಗ್ಯ ಮಾರ್ಗದರ್ಶಕರಾದ ಸರಿತಾ, ಲಕ್ಷ್ಮಿ ಮತ್ತು ನಾಗವೇಣಿ ಮುಂತಾದವರಿದ್ದರು.

ಸಭಾ ಕಾರ್ಯಕ್ರಮದ ನಂತರ ಶ್ರೇಯಾ ಹಾಗೂ ತಂಡದವರಿಂದ ಬಯಲಾಟ ನೃತ್ಯ ಪ್ರದರ್ಶನ ನಡೆಯಿತು. ಸೂತ್ರದ ಗೊಂಬೆಯಾಟದಲ್ಲಿ ಏಕಲವ್ಯನ ಕಥೆ ಮತ್ತು ರಾಮಾಯಣದಲ್ಲಿ ಸೀತಾಪಹರಣದ ಸನ್ನಿವೇಶಗಳನ್ನು ಸೂತ್ರದ ಗೊಂಬೆ ಆಟದ ಮೂಲಕ ಪ್ರದರ್ಶಿಸಿದರು. ಭರತನಾಟ್ಯ, ಸುಗಮ ಸಂಗೀತ ಮತ್ತು ನಾಡು ನುಡಿಯ ಗೀತಗಾಯನ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಸೂರಜ್ ಕೆರವಾಡಕರ ಸ್ವಾಗತಿಸಿದರು .ಗೊಂಬೆ ಆಟದ ಕಲಾವಿದ ಸಿದ್ದಪ್ಪ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.

Exit mobile version