Site icon ಒಡನಾಡಿ

ಆಶ್ರಯ ಮನೆ ಬಾಡಿಗೆ ನೀಡಿದರೆ, ಮಾರಾಟ ಮಾಡಿದರೆ ಕಾನೂನು ಕ್ರಮ- ಪೌರಾಯುಕ್ತ ಪವಾರ ಎಚ್ಚರಿಕೆ

ದಾಂಡೇಲಿ ನಗರದ ಅಂಬೇವಾಡಿಯಲ್ಲಿ ನಿರ್ಮಾಣಗೊಂಡಿರುವ ಜಿ ಪ್ಲಸ್ ಟು ( ಪಿಎಂಎವೈ ಯೋಜನೆಯಡಿಯಲ್ಲಿ ) ಆಶ್ರಯ ಮನೆಗಳ ಹಂಚಿಕೆಯ ವಿಚಾರದಲ್ಲಿ ಅನಗತ್ಯ ಗೊಂದಲ ಮಾಡಿಕೊಳ್ಳದಂತೆ ತಿಳಿಸಿರುವ ಪೌರಾಯುಕ್ತ ರಾಜಾರಾಮ ಪವಾರವರು ನೀಡಿರುವ ಆಶ್ರಯ ಮನೆಗಳನ್ನು ಬೇರೆಯವರಿಗೆ ಬಾಡಿಗೆ ನೀಡಿದ್ದು ಅಥವಾ ಮಾರಾಟ ಮಾಡಿದ್ದು ಕಂಡು ಬಂದರೆ ಹಾಗೂ ಮಧ್ಯವರ್ತಿಗಳಿಗೆ ಹಣ ನೀಡಿದ್ದು ಬಂದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು ಈಗಾಗಲೇ ಶಾಸಕರಾದ ಆರ್.ವಿ. ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳಿಗೆ 108 ಮನೆಗಳ ಹಸ್ತಾಂತರವನ್ನು ಮಾಡಿಕೊಡಲಾಗಿದೆ. ಮನೆ ಹಂಚಿಕೆ ಕಾರ್ಯವನ್ನು ಕೂಡಾ ಶಾಸಕರ ಅಧ್ಯಕ್ಷತೆಯಲ್ಲಿ ಮಾಡಲಾಗಿದೆ. ಈಗಾಗಲೇ ಹಂಚಿಕೆ ಮಾಡಲಾದಂತಹ ಎಲ್ಲಾ ಫಲಾನುಭವಿಗಳು
ತಮಗೆ ಹಂಚಿಕೆ ಮಾಡಲಾದ ಮನೆಯಲ್ಲಿ ಹೋಗಿ ತಾವು ವಾಸವಾಗತಕ್ಕದ್ದು. ಮತ್ತು ಅದರ ಜೊತೆಗೆ ನೊಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರಕ್ಕೆ ಭರಣಾ ಮಾಡುವ ನೊಂದಣಿಯ ವೆಚ್ಚ ಕೇವಲ 500 ರೂ. ಒಳಗೆ ಇರುತ್ತದೆ. ಇದರ ಮೇಲೆ ನೊಂದಣಿಯ ವೆಚ್ಚ ಯಾವುದೂ ಇರುವುದಿಲ್ಲ. ಜೊತೆಗೆ ತಮಗೆ ಹಸ್ತಾಂತರಿಸಲಾದ ಮನೆಗಳಲ್ಲಿ ತಾವೇ ಹೋಗಿ ಖುದ್ದಾಗಿ ವಾಸವಾಗತಕ್ಕದ್ದು ಎದಿದ್ದಾರೆ.

ಇನ್ನು ಹಂತ ಹಂತವಾಗಿ ಉಳಿದ ಮನೆಗಳ ನಿರ್ಮಾಣ ಕಾರ್ಯ ಮಾಡಿ ಉಳಿದಂತಹ ಮನೆಗಳನ್ನು ಕೂಡಾ ಹಂಚಿಕೆ ಮಾಡಲಾಗುವುದು. ಯಾರೂ ಫಲಾನುಭವಿಗಳು ಈ ಮನೆಗಳನ್ನು ಬಾಡಿಗೆ ಕೊಡುವುದಾಗಲೀ ಅಥವಾ ಮಾರಾಟ ಮಾಡುವುದಾಗಲೀ ಮಾಡಿದರೆ ಅಥವಾ ಹೋಗಿ ಇರದೇ ಇದ್ದಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಹಾಗೂ ಹೀಗೆ ಮಾಡಿದವರ ಮಂಜೂರಾತಿಯಾದ ಮನೆಯನ್ನು ಸಹ ನಾವು ರದ್ದು ಮಾಡಿ ಮುಂದಿನ ಅರ್ಹ ಫಲಾನುಭವಿಗಳಿಗೆ ಆಯ್ಕೆ ಮಾಡಿ ನೀಡಲಾಗುತ್ತದೆ.

ಉಳಿದಂತಹ ಜಿ ಪ್ಲಸ್ ಟು ಮನೆಗಳ ನಿರ್ಮಾಣ ಮತ್ತು ಹಂಚಿಕೆಯ ವಿಚಾರವಾಗಿ ನಾವು ಹಂತಹಂತವಾಗಿ ಮನೆಗಳ ನಿರ್ಮಾಣ ಕಾರ್ಯವನ್ನು ಮಾಡಿ ಎಲ್ಲ ಫಲಾನುಭವಿಗಳಿಗೂ ಮನೆಗಳನ್ನು ವಿತರಣೆಮಾಡಲಾಗುವುದು. ಈ ಕುರಿತು ಶಾಸಕರು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ. ಪದೇ ಪದೇ ಸಾರ್ವಜನಿಕರಲ್ಲಿ ಮನೆಯನ್ನು ನೀಡುತ್ತಾರೋ ಇಲ್ಲವೋ ಎಂಬ ಗೊಂದಲ ಯಾರಲ್ಲಿಯೂ ಬೇಡ. ಸದ್ಯ ಮಳೆಗಾಲ ಇರುವುದರಿಂದ ಹತ್ತು ಹಲವು ಕೆಲಸ ಕಾರ್ಯಗಳು ಇರುವುದರಿಂದ ಎಲ್ಲಾ ಜೊತೆ ಜೊತೆಯಾಗಿ ಕಾರ್ಯವನ್ನು ಸಹ ಮಾಡಬೇಕಾಗಿದೆ. ಕಾರಣ ನಗರಸಭೆಯ ಜೊತೆಗೆ ಸಾರ್ವಜನಿಕರೂ
ಸಹಕರಿಸಬೇಕು. ಮನೆ ಪೂರ್ಣ ನಿರ್ಮಾಣಗೊಂಡ ಮೇಲೆ ಹಂಚಿಕೆಯನ್ನು ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಸಾರ್ವಜನಿಕರೂ ಸಹ ಸಹಕರಿಸಬೇಕು ಎಂದು ಪೌರಾಯುಕ್ತ ರಾಜಾರಾಮ ಪವಾರ ತಿಳಿಸಿದ್ದಾರೆ.

Exit mobile version