Site icon ಒಡನಾಡಿ

ಮನೆಯ ಬಾಗಿಲಲ್ಲೇ ಪ್ರತ್ಯಕ್ಷವಾದ ಮೊಸಳೆ

ದಾಂಡೇಲಿ ತಾಲೂಕಿನ ಅಂಬೇವಾಡಿಯ ಮನೆಯೊಂದರ ಬಳಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಆತಂಕಕ್ಕೆ ಕಾರಣವಾಗಿರುವ ಘಟನೆ ಬುಧವಾರ ನಡೆದಿದೆ.

ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆಗಳು ಸಾಕಷ್ಟಿರುವುದು ಜನನಿತ. ಇಲ್ಲಿ ಬೃಹದಾಕಾರದ ಮೊಸಳೆಗಳಿವೆ. ಕೆಲ ಸಂದರ್ಭದಲ್ಲಿ ಈ ಮೊಸಳೆಗಳು ಮನುಷ್ಯನ ಮೇಲೆ ದಾಳಿ ನಡೆಸಿ ಅವಘಡಗಳೂ ಸಂಭವಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಸಳೆಗಳು ನದಿಯಿಂದ ಹೊರಬಂದು ಜನವಸತಿ ಪ್ರದೇಶದ ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ.

ಬುಧವಾರ ನಡೆದಿದ್ದು ಅದೇ ಅಂಬೇವಾಡಿಯ ಅರುಣಾದ್ರಿ ರಾವ್ ಎಂಬವರ ಮನೆ ಎದುರು ಮೊಸಳೆಯೊಂದು ಕಾಣಿಸಿಕೊಂಡಿದೆ. ರಾತ್ರಿ ಮನೆಯಲ್ಲಿ ಮಲಗಿದ್ದ ಅರುಣಾದ್ರಿ ರಾವ್ ರವರು ಮುಂಜಾನೆ ಎದ್ದು ಮನೆಯ ಬಾಗಿಲನ್ನು ತಡೆಯುತ್ತಿದ್ದಂತೆಯೇ ಬಾಗಿಲ ಮೆಟ್ಟಿಲ ಬಳಿಯೇ ಮೊಸಳೆ ಪ್ರತ್ಯಕ್ಷವಾಗಿದೆ. ನಂತರ ಅಲ್ಲಿಂದ ಸಾವಕಾಶವಾಗಿ ಚಲಿಸಿದ ಮೊಸಳೆ ಮನೆ ಎದುರುಗಡೆ ಇದ್ದ ಹೂವಿನ ಕುಂಡದ ಜಾಗದಲ್ಲಿ ಸೇರಿಕೊಂಡಿದೆ.

ಈ ವಿದ್ಯಮಾನದಿಂದ ಅರುಣಾದ್ರಿ ರಾವ್ ಕುಟುಂಬ ಹಾಗೂ ಅಕ್ಕಪಕ್ಕದ ಮನೆಯವರೆಲ್ಲರೂ ಆತಂಕಗೊಂಡಿದ್ದಾರೆ. ತಕ್ಷಣ ಉರಗ ತಜ್ಞ ರಜಾಕ್ ಷಾ ಅವರಿಗೆ ವಿಷಯ ತಲುಪಿಸಿದಾಗ ಸ್ಥಳಕ್ಕೆ ಧಾವಿಸಿದ ರಜಾಕ್ ಷಾ ಅವರು ಮೊಸಳೆಯನ್ನ ಹಿಡಿದು ಕಾಳಿನದಿಗೆ ಬಿಟ್ಟು ಬಂದಿದ್ದಾರೆ. ಮೊಸಳೆ ಸುಮಾರು 5 ಫೀಟ್ ಉದ್ದವಿತ್ತು ಎನ್ನಲಾಗಿದೆ.

ದಿನಗಳ ಹಿಂದಷ್ಟೇ ನಗರದ ಇಎಸ್ಐ ಆಸ್ಪತ್ರೆಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿತ್ತು. ಹೀಗೆ ಇತ್ತೀಚಿನ ದಿನಗಳಲ್ಲಿ ಮೊಸಳೆಗಳು ಜನವಸತಿ ಪ್ರದೇಶ ಹಾಗೂ ಮನೆಗಳ ಹತ್ತಿರ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ವರದಿ : ಅಕ್ಷಯಗಿರಿ ಗೋಸಾವಿ

Exit mobile version