Site icon ಒಡನಾಡಿ

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ವಂಚಿತರಾಗದಂತೆ ನೋಡಿಕೊಳ್ಳಿ : ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು : ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ.  ಪರೀಕ್ಷೆ ಬರೆಯಲಿರುವ  ಯಾವ  ವಿದ್ಯಾರ್ಥಿಗಳೂ ಸಹ  ಹಾಲ್‌ ಟಿಕೆಟ್‌ ಸಿಗದೆ ಪರೀಕ್ಷೆಯಿಂದ ವಂಚಿತರಾಗ ಕೂಡದು. ನಿಗದಿತ ಅವಧಿಯೊಳಗೆ ಎಲ್ಲ ಮಕ್ಕಳಿಗೂ ಹಾಲ್‌ ಟಿಕೆಟ್‌ ದೊರಕಿಸಲು ಕ್ರಮ ವಹಿಸುವಂತೆ ರಾಜ್ಯದ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು (ಡಿಡಿಪಿಐ), ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ  ಆದೇಶ ನೀಡಿದೆ.

ಅಲ್ಲದೆ, ಸಂಬಂಧಪಟ್ಟ ಶಾಲಾ ಮುಖ್ಯಸ್ಥರುಗಳು ಸಹ ತಮ್ಮ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯೊಳಗೆ ಹಾಲ್‌ ಟಿಕೆಟ್‌ ನೀಡಲು ಕ್ರಮ ಕೈಗೊಳ್ಳಬೇಕು. ಯಾವುದೇ ವಿದ್ಯಾರ್ಥಿ ಹಾಲ್‌ ಟಿಕೆಟ್‌ ದೊರೆಯದೆ ಮಾನಸಿಕ ಸಮಸ್ಯೆಗೆ, ಆತಂಕಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕೆಂದು ಸೂಚನೆ ನೀಡಿದೆ.

  ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲೇನಿದೆ…?
ಪೂರ್ಣ ಶುಲ್ಕ ವಸೂಲಿಗೆ ಹೊಸ ಮಾರ್ಗ ಹುಡುಕಿದ್ದ ಕೆಲ ಖಾಸಗಿ ಶಾಲೆಗಳು ಬಾಕಿ ಶುಲ್ಕ ಪಾವತಿಸದಿದ್ದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಲ್‌ ಟಿಕೆಟ್‌ ನೀಡುವುದಿಲ್ಲ ಎಂದು ತಮ್ಮ ಶಾಲೆಯ ಮಕ್ಕಳು ಹಾಗೂ ಪೋಷಕರನ್ನು ಸತಾಯಿಸುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಎಚ್ಚೆತ್ತ ಶಿಕ್ಷಣ ಇಲಾಖೆ ಈ ಸಂಬಂಧ ಎಲ್ಲ ಶಾಲೆಗಳ ಮುಖ್ಯಸ್ಥರು ಹಾಗೂ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸುತ್ತೋಲೆ ಮೂಲಕ ಖಡಕ್‌ ಸೂಚನೆ ರವಾನಿಸಿದೆ.

 ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಅಧ್ಯಕ್ಷರೂ ಆದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು  ಸುತ್ತೋಲೆ ಹೊರಡಿಸಿದ್ದಾರೆ.
ಜು.19 ಮತ್ತು 22ರಂದು ನಿಗದಿಯಾಗಿರುವ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಎಲ್ಲ ವಿದ್ಯಾರ್ಥಿಗಳ ಹಾಲ್‌ ಟಿಕೆಟ್‌ಗಳನ್ನು ಆಯಾ ಶಾಲೆಗಳಿಗೆ ಕಳುಹಿಸಲಾಗಿದೆ. ಶಾಲೆಯ ಪ್ರಾಂಶುಪಾಲರು ತಮ್ಮ ಲಾಗಿನ್‌ ಮೂಲಕ ಹಾಲ್‌ ಟಿಕೆಟ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ನಿಗದಿತ ಅವಧಿಯೊಳಗೆ ವಿದ್ಯಾರ್ಥಿಗಳಿಗೆ ನೀಡಲು ಸೂಚಿಸಲಾಗಿದೆ. ಬಹುತೇಕ ಶಾಲೆಗಳು ಅದರಂತೆ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ನೀಡಿವೆ.
ಆದರೆ, ಕೆಲ ಶಾಲೆಗಳು ಬಾಕಿ ಶುಲ್ಕ ವಸೂಲಿ ಹೆಸರಲ್ಲಿ ಹಾಲ್‌ ಟಿಕೆಟ್‌ ನೀಡದಿರುವ ಬಗ್ಗೆ ವರದಿಗಳಾಗಿವೆ. ಯಾವುದೇ ಕಾರಣಕ್ಕೂ ಹಾಲ್‌ಟಿಕೆಟ್‌ ಸಿಗದೆ ಯಾವೊಬ್ಬ ವಿದ್ಯಾರ್ಥಿಯೂ ಆತಂಕ, ಮಾನಸಿಕ ಸಮಸ್ಯೆಗೆ ಒಳಗಾಗುವುದಾಗಲಿ, ಪರೀಕ್ಷೆಯಿಂದ ವಂಚಿತರಾಗುವುದಾಗಲಿ ನಡೆಯಕೂಡದು. ಆಯಾ ಶಾಲಾ ಮುಖ್ಯಸ್ಥರು, ಸಂಬಂಧಿಸಿದ  ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು  ಉಪನಿರ್ದೇಶಕರು  ನಿಗದಿತ ಅವಧಿಯೊಳಗೆ ಎಲ್ಲ ಮಕ್ಕಳಿಗೂ ಹಾಲ್‌ ಟಿಕೆಟ್‌ ತಲುಪುವಂತೆ ನೋಡಿಕೊಳ್ಳಬೇಕು.  ಈ ವಿಚಾರದಲ್ಲಿ ಅಗತ್ಯಬಿದ್ದರೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಅಧಿಕಾರಿಗಳು ಸಂಪರ್ಕಿಸಬಹುದು. ಒಟ್ಟಿನಲ್ಲಿ ಯಾವ ಮಕ್ಕಳೂ ಪರೀಕ್ಷೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕೆಂದು ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Exit mobile version