Site icon ಒಡನಾಡಿ

ವೆಸ್ಟ್ ಕೋಸ್ಟ್ ಕಾಗದ ಕಂಪನಿಯ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ…

ದಾಂಡೇಲಿಯ ವೆಸ್ಟ್‌ ಕೋಸ್ಟ್ ಪೇಪರ್ ಮಿಲ್‍ನ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಶೀಘ್ರ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು ಸತ್ಯಾಗ್ರಹ ಗುರುವಾರ ಮೂರು ದಿನಗಳನ್ನು ಪೂರೈಸಿದೆ.

ಹಗಲು-ರಾತ್ರಿಯಿಡೀ ಸುರಿವ ಮಳೆಯಲ್ಲೇ ಜಂಟಿ ಸಂಧಾನ ಸಮಿತಿಯ ಸದಸ್ಯರು ಸತ್ಯಾಗ್ರಹ ಮುಂದುವರೆಸಿದ್ದಾರೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಧರಣಿ ಸ್ಥಳದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ತಾಡಪತ್ರಿಯ ಹೊದಿಕೆ ಹಾಕಲಾಗಿದ್ದು, ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರೆಯುತ್ತದೆ ಎಂದು ಜೆ.ಎನ್.ಸಿ ಪ್ರಮುಖರು ತಿಳಿಸಿದ್ದಾರೆ.

ರಾತ್ರಿ 9 ಗಂಟೆಯಿಂದ ನೈಟ್ ಕರ್ಪ್ಯು ಜಾರಿಯಲ್ಲಿದ್ದುದರಿಂದ ಧರಣಿ ಸ್ಥಳದಲ್ಲಿ ನಾಲ್ಕು ಜನರಿಗಿಂತ ಕಡಿಮೆ ಜನರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಮುಂಜಾನೆಯ ಹೊತ್ತಿಗೆ ಮತ್ತೆ ಕಾರ್ಮಿಕರು ಜಮಾಯಿಸಿದ್ದರು.

ಜಂಟಿ ಸಂದಾನ ಸಮಿತಿಯ ಪ್ರಮುಖರಾದ ಉದಯ ನಾಯ್ಕ, ಬಿ.ಡಿ. ಹಿರೇಮಠ, ಸಿ.ವಿ. ಲೋಕೇಶ, ಶ್ರೀನಿವಾಸ ಘೋಟ್ನೇಕರ, ಭರತ್ ಪಾಟೀಲ, ಸಲಿಂ ಸಯ್ಯದ್, ರೂಪೇಶ ಪವಾರ್, ಹನ್ಮಂತ ಖಾರ್ಗಿ, ಪ್ರಮೋದ ಕದಂ, ಕಲ್ಲಪ್ಪ, ಶ್ರೀಕಾಂತ ಗವಸ, ಸಂಗೀತರಾವ್ ಮುಂತಾದವರು ಧರಣಿಯಲ್ಲಿ ನಿರತರಾಗಿದ್ದರು.

ಇದೇ ಸಂದರ್ಭದಲ್ಲಿ ಕಂಪನಿಯು ಕೊರೊನಾ ಕಾರಣದಿಂದ ಸಂಕಷ್ಟದಲ್ಲಿದೆ. ಕಾರ್ಮಿಕರು ನಮ್ಮ ಕುಟುಂಬ ಸದಸ್ಯರಿದ್ದ ಹಾಗೆ. ಕಂಪನಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಾತುಕತೆಗೆ ಸಿದ್ದವಿದೆಯೆಂದು ಕಂಪನಿಯ ಹಿರಿಯ ಅಧಿಕಾರಿ ಎಸ್.ಎನ್. ಪಾಟೀಲ್ ತಿಳಿಸಿದ್ದಾರೆ.

Exit mobile version