Site icon ಒಡನಾಡಿ

ಬಳಪದಲ್ಲಿ ಹೊಳಪು ಮೂಡಿಸುವ ಕಲಾವಿದ ಸಂತೋಷ ರಾಣೆ

ಭಾವನೆ ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬಣ್ಣ ಅಥವಾ ರೇಖೆಗಳಿಂದ ಜೋಡಿಸಲಾದ ಅಂಶಗಳ ರೂಪವೇ ಕಲೆ ಎನ್ನುತ್ತಾರೆ. ಇದು ಸಂಗೀತ, ಸಾಹಿತ್ಯ, ಸಿನಿಮಾ, ಪೋಟೋಗ್ರಾಫಿ, ಶಿಲ್ಪಕಲೆ ಅಷ್ಟೇ ಅಲ್ಲ ವರ್ಣಚಿತ್ರಕಲೆ (ಪೇಂಟಿಂಗ್) ಗಳ ಮೂಲಕ ಅಭಿವೈಕ್ತಿಸಬಹುದಾಗಿದೆ. ಕಲೆಯಲ್ಲಿ ಕಲಾವಿದ ತನ್ನ ಉದ್ದೇಶಗಳನ್ನು ಸ್ಪಷ್ಟವಾಗಿ ಚಿತ್ರಿಸಿರುತ್ತಾನೆ. ಕಲೆಗಳಲ್ಲಿ ಸೂಕ್ಷ್ಮವಾದ ಸಂವೇದನೆಗಳಿರುತ್ತವೆ. ಸಂದೇಶವಿರುತ್ತದೆ. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎಂಬಂತೆ ಚಿತ್ರಕಲೆಯ ಸ್ವಾದವನ್ನು ಆಸದವಾದಿಸಿದವರಿಗೇ ಗೊತ್ತು ಚಿತ್ರಕಲೆಯ ಸೌಂದರ್ಯ. ಕಲೆಯ ಮೌ¯್ಯ ಕಟ್ಟಲಾಗದು ಎಂಬ ಮಾತು ಅತಿಶಯೋಕ್ತಿಯೇನೂ ಅನ್ನಿಸಲಾರದು.

ಇಂತಹ ಕಲಾ ಪ್ರಪಂಚದಲ್ಲಿ ತನ್ನ ಬದುಕನ್ನು ಕಟ್ಟಿಕೊಂಡವರಲ್ಲಿ ದಾಂಡೇಲಿಯ ಸಂತೋಷ್ ರಾಣೆ ಕೂಡಾ ಒಬ್ಬರು. ಇವರೊಬ್ಬ ಏಕಲವ್ಯನಂತೆ ಕಲಾ ಪ್ರಪಂಚದಲ್ಲಿ ಬೆಳೆದವರು. ಚಿಕ್ಕಂದಿನಿಂದಲೂ ಚಿತ್ರಕಲೆ, ರಂಗೋಲಿ ಬಿಡಿಸುವುದರಲ್ಲಿ ಆಸಕ್ತಿ ಹೊಂದಿದ್ದ ಇವರಿಗೆ ಸೂಕ್ತ ವೇದಿಕೆಗಳು ಸಿಕ್ಕಿರಲಿಲ್ಲ. ಇಲ್ಲಿಯ ಹಲವು ಕಲಾವಿದರು ಬಿಡಿಸುವ ರಂಗೋಲಿ ಕಲೆಗಳನ್ನು ತಪ್ಪದೇ ನೋಡುತ್ತಿದ್ದ. ಮುಂದೆ ತಾನೂ ಕೂಡಾ ಇವರ ಹಾಗೆಯೇ ಆಗಬೇಕು ಎಂದು ಗುರಿ ಇಟ್ಟುಕೊಂಡವ. ತಾನು ತಾನಾಗಿಯೇ ಕಲಾವಿದನಾಗಿ ಬೆಳೆದವ. ಕಾಗದ ಕಂಪನಿಯಲ್ಲಿಯೂ ಉದ್ಯೋಗಿಯಾಗಿರುವ ಸಂತೋಷ್ ರಾಣೆ ಇದೀಗ ನಗರದ ಪ್ರಭುದ್ಧ ಕಲಾವಿದರಲ್ಲೊಬ್ಬ.

ಪ್ರತೀ ಬಾರಿ ಶ್ರಾವಣ, ಸಂಕ್ರಾಂತಿ, ಶಿವರಾತ್ರಿಗಳಲ್ಲಿ ಮಂದಿರಗಳ ಆವಾರದಲ್ಲಿ ರಂಗೋಲಿ ಬಿಡಿಸಿ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದ ರಾಣೆ ಈಗ ಬಹು ಬೇಡಿಕೆಯ ಕಲಾವಿದ. ರಂಗೋಲಿ, ಚಿತ್ರಕಲೆಗಳಲ್ಲಿ ಹಲವಾರು ಬಹುಮಾನ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಆಯಿಲ್ ಪೇಂಟ್ ಮಾಡುತ್ತಿದ್ದ ಈತ ಈಗ ರಂಗೋಲಿ ಬಿಡಿಸುವುದರಲ್ಲಿ ಪರಿಣಿತ. ಈಗಾಗಲೇ ನರೇಂದ್ರ ಮೋದಿ, ಸಿ.ವಿ. ರಾಮನ್, ಆರ್.ವಿ. ದೇಶಪಾಂಡೆ, ಕೆ.ಎಲ್. ಚಾಂಡಕ್ ಸೇರಿದಂತೆ ಹಲವರ ವಯಕ್ತಿಕ ಚಿತ್ರ್ರಗಳನ್ನೂ ಸಹ ಹುಬೇ ಹುಬೇ ಎನ್ನುವಂತೆ ಬಿಡಿಸಿರುವ ಸಂತೋಷ್, ಭಾಗಶಹ ಎಲ್ಲ ರೀತಿಯ ವನ್ಯಜೀವಿಗಳನ್ನೂ ಬಿಡಿಸಿದ್ದಾರೆ.

ಇವರ ಮತ್ತೊಂದು ವಿಶೇಷವಾದ ಕೌಶಲ್ಯವೆಂದರೆ ಕಲೆಯೆಂದರೆ ಚಾಕಪೀಸ್‍ನಲ್ಲಿ ಸೂಕ್ಷ್ಮ ಕಲೆ ಅರಳಿಸುವುದು. ಒಂದು ಕಡು (ಬಳಪ) ತುಂಡು ಪಡೆದು ಅದರಲ್ಲಿ ಸಿಂಹ ಸೇರಿದಂತೆ ಹಲವು ಪ್ರಾಣಿ ಹಾಗೂ ಮನುಷ್ಯನ ಚಿತ್ತಾರ ಬಿಡಿಸಿ ಸೈ ಎನಿಸಿಕೊಂಡಿದ್ದಾರೆ. ‘ನನ್ನದು ಇದು ಹವ್ಯಾಸ. ಕಲೆಯನ್ನು ನನ್ನ ಬದುಕಿನಲ್ಲಿ ಆರಾಧಿಸುತ್ತಿದ್ದೇನೆ. ಕಲೆಯನ್ನು ಬಿಟ್ಟಿರಲಾರದಂತಹ ಬದುಕು ನನ್ನದು. ಯಾರೇ ಅಪೇಕ್ಷಿಸಿದರೂ ನನ್ನೊಳಗಿರುವ ಕಲೆಯನ್ನು ಧಾರೆಯೆರೆಯಲಿ ನಾನು ನನ್ನ ಸಮಯಮಿತಿಯಲ್ಲಿ ಸಿದ್ದನಿದ್ದೇನೆ ಎನ್ನು ಸಂತೋಷ್ ರಾಣೆಗೆ ಸಕಾಲದಲ್ಲಿ ಸೂಕ್ತ ತರಬೇತಿ ದೊರೆತಿದ್ದರೆ ಈ ಕಲಾವಿದ ಇನ್ನೂ ಎತ್ತರಕ್ಕೆ ಬೆಳೆಯುತ್ತಿದ್ದ ಎಂಬುದರಲ್ಲಿ ಎರಡು ಮಾತಿಲ್ಲ.

Exit mobile version