Site icon ಒಡನಾಡಿ

ಮೊದಲ ಮಳೆಗೇ ಒಳ ಚರಂಡಿಯ ರಗಳೆ : ಅಗೆದು ಅರ್ಧಕ್ಕೆ ಬಿಟ್ಟ ರಸ್ತೆಗಳು: ನಡೆದಾಡಲೂ ಆಗದೇ ಪರದಾಡುತ್ತಿರುವ ಸಾರ್ವಜನಿಕರು

ದಾಂಡೇಲಿ:  ನಗರದಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿ ಭಾಗಶಹ ನಿರೀಕ್ಷೆಯಂತೆಯೇ ಮೊದಲ ಮಳೆಗೇ ತನ್ನ ರಗಳೆಗಳನ್ನು ಎಳೆ ಎಳೆಯಾಗಿ ಹರಡಿಕೊಂಡಿದೆ.  ಜನ ಈ ಸಮಸ್ಯೆಯಿಂದ ಗೋಳಾಡುತ್ತಿದ್ದರೂ, ತಮ್ಮ ಅಳಲು ಕೇಳಲು ಬಾರದ ಆಳುವವರ ಬಗ್ಗೆ ಬೇಸರಿಸಿರಿಸಿಕೊಳ್ಳೂತ್ತಿದ್ದಾರೆ.

  ದಾಂಡೇಲಿಯ ವಿವಿದೆಡೆ ನೂರಾರು ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ  ನಡೆಯುತ್ತಿದೆ. ಆರಂಭದಲಿ  ಈ ಕಾಮಗಾರಿ ಅನುಷ್ಠಾನಕ್ಕೆ ವಿರೋಧ ಬಂದಿತ್ತಾದರರೂ ಆ ಮೇಲೆ ತಣ್ಣಗಾಗಿತ್ತು.  ದೊಡ್ಡ ದೊಡ್ಡ ದನಿಯಲ್ಲಿ ಒದರಾಡಿದ್ದ ನಗರವನ್ನಾಳೂವವರೂ ಇದ್ದಕ್ಕಿದ್ದಂತೆ ಬಾಯಿಗೆ ಬಟ್ಟೆಕಟ್ಟಿಕೊಂಡು ಬಿಟ್ಟಿದ್ದರು.  ಕೆಲಸ ಆರಂಭವಾಗಿತ್ತು. ಗಲ್ಲಿ ಗಲ್ಲಿಗಳಲ್ಲಿ ಇದ್ದ ರಸ್ತೆಯನ್ನು ಅಗೆದು ತಿಂಗಳುಗಟ್ಟಲೆ ಹಾಗೇ ಬಿಟ್ಟಿದ್ದಕ್ಕೆ ಹಾಗೂ ಕಾಮಗಾರಿಯಲ್ಲಿ ಗುಣಮಟ್ಟ ಇಲ್ಲ ಎಂದು ಆಕ್ಷೇಪಿಸಿ ಕೆಲವರು ವಿರೋಧಿಸಿದ್ದರು, ಪ್ರತಿಭಟಿಸಿದ್ದರು. 

  ತದ ನಂತರ ಕೊರೊನಾ ಬಂದ ಕಾರಣ ಸರಿ ಸುಮಾರು ಎರಡು ತಿಂಗಳು ಈ ಕಾಮಗಾರಿಯೇ ಸ್ಥಗಿತವಾಗಿತ್ತು. ಭಾಗಶಹ ಮಳೆಗಾಲದೊಳಗೆ ಮುಗಿಸಬೇಕಿದ್ದ ಅವರ ಪೂರ್ವ ನಿಯೋಜಿತ ಯೋಜನೆಯ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ತದ ನಂತರ ಅಗತ್ಯ ಕಾಮಗಾರಿ ಪೂರ್ಣಗೊಳಿಸಲು ಸರಕಾರ ಆದೇಸಿಸಿತ್ತು. ಇವರೂ ಕೆಲಸ ಆರಂಭಿಸಿದ್ದರು. ಈಗಲೂ ನಗರದ ಗಣೇಶನಗರ, ಅಂಬೇವಾಡಿ, ಮಾರುತಿನಗರ, ಗಾಂಧಿನಗರ, ಅಜಾದನಗರ ವನಶ್ರೀ ನಗರ, ಐಡಿಎಸ್‍ಎಮ್‍ಟಿ ಲೇ ಔಟ್ ಸೇರಿದಂತೆ ಹಲವೆಡೆ ಒಳಚರಂಡಿ ಕಾಮಗಾರಿ ಅರ್ದಮರ್ಧವಾಗಿದೆ. ಕೆಲ ರಸ್ತೆಗಳನ್ನು ಅಗೆದು ಬಿಡಲಾಗಿದೆ. ಕೆಲವೆಡೆ ಪೈಪ್ ಜೋಡಿಸಲಾಗಿದೆಯಾದರೂ ಪೂರ್ಣಗೊಂಡಿಲ್ಲ.

 ಹೀಗೆ ಅರ್ದಮರ್ಧ ಕೆಲಸವಾಗಿದ್ದರಿಂದ  ಜೊತೆಗೆ ಚೆನ್ನಾಗಿಯೇ ಇದ್ದ ಡಾಂಬರು ರಸ್ತೆಯನ್ನು ಅಗೆದು ಬಿಟ್ಟಿದ್ದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ಬಹಳ ಸಮಸ್ಯೆಯಾಗಿತ್ತು. ಈಗ ಮುಂಗಾರು ಮಳೆ ಪ್ರಾರಂಭವಾಗಿದೆ. ರವಿವಾರ ಮೊದಲ  ಮುಂಗಾರು ಮಳೆ ದಾಂಡೇಲಿಯಲ್ಲಿ ಜೋರಾಗಿಯೇ ಬಂದಿದೆ.  ಮಳೆಯ ಆರ್ಭಟಕ್ಕೆ ರಸ್ತೆಗಳೆಲ್ಲ ನೀರಿನಿಂದ ತುಂಬಿಕೊಂಡಿವೆ. ಒಳಚರಂಡಿ ಕಾಮಗಾರಿ ನಡೆಯುತ್ತಿದ್ದ ರಸ್ತೆಗಳಲ್ಲಂತೂ ಈ ಮಳೆಯಿಂದಾಗಿ ಆಗಿರುವ ಅನಾಹುತಗಳು, ಸಮಸ್ಯೆಗಳೂ ಒಂದೆರಡಲ್ಲ. 

  ರಸ್ತೆ ಅಗೆದಿದ್ದ ಕಾರಣ, ಮಳೆ ಬಂದು ಆ ರಸ್ತೆ ತುಂಬಾ ನೀರಿನಿಂದ ರಾಡಿಯಾಗಿದೆ. ಆ ರಸ್ತೆಯಲ್ಲಿ ಜನರ ಸಂಚಾರವಂತೂ ಕಷ್ಟ ಸಾದ್ಯ ಎಂಬಂತಾಗಿದೆ. ರಸ್ತೆಗಿಳಿದು ಮನೆಯ ಮೆಟ್ಟಿಲು ಹತ್ತುವಂತಿಲ್ಲ. ಹಾಗೆ ಹತ್ತಿದರೆ ರಸ್ತೆಯ ರಾಡಿಯೆಲ್ಲ ಮನೆಗಳೋಳಗೆ.  ಇನ್ನು ದ್ವಿಚಕ್ರ ವಾಹನ ತೆಗೆಯುವುದು ಬಹಳ ಕಷ್ಟವಾಗಿದೆ. ನಗರಾಡಳಿತವೂ ಅದ್ಯಾಕೋ ಮೌನವಾಗಿದೆ.  ಮೊದಲ ಮಳೆ ಹನಿಯಿಂದಲೇ ದಾಂಡೇಲಿಯ ಬಹಳಷ್ಟು ಒಳ ರಸ್ತೆಗಳೂ ಸಂಪೂರ್ಣವಾಗಿ  ಒಳಚರಂಡಿಯ ರಾಡಿಯಿಂದ ಮೆತ್ತಿಕೊಂಡಿದ್ದು ಈ ಸಮಸ್ಯೆಯನ್ನು ಸಂಬಂದಟ್ಟವರು ನಿವಾರಿಸುವರೇ ಕಾದು ನೋಡಬೇಕಿದೆ.

     ಸರಿಪಡಿಸುತ್ತಿದ್ದೇವೆ  :   ಒಳಚರಂಡಿ ಕಾಮಗಾರಿಯ ಸಂದರ್ಭದಲ್ಲಿ ಮಳೆ ಬಂದಾಗ ಈ ಸಮಸ್ಯೆ ಸಹಜ. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ದಾಂಡೇಲಿಯಲ್ಲಿ ಮೂರ್ನಾಲ್ಕು ಕಡೆ ಆಗಿರುವ ಸಮಸ್ಯೆ ಸರಿ ಪಡಿಸುವ ಕೆಲಸ ಸೋಮವಾರವೇ ನಡೆದಿದೆ.  ಮಳೆಗಾಲದಲ್ಲಿ ನಿರಂತರ ಕೆಲಸ ನಡೆಯುವುದಿಲ್ಲ. ಇಂತಹ ತುರ್ತು ಕೆಲಸಗಳಿದ್ದರೆ ಮಾಡಬೇಕಾಗುತ್ತದೆ ಎಂದು ಕರ್ನಾಟಕ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಸದಾನಂದ ಬಾಂದೇಕರ ತಿಳಿಸಿದ್ದಾರೆ.

Exit mobile version