Site icon ಒಡನಾಡಿ

ಕೊರೊನಾ ಲಾಕ್‍ಡೌನ್ ಸಂಕಷ್ಠದಲ್ಲಿ ಅಶಕ್ತ ಯಕ್ಷಗಾನ ಕಲಾವಿದರು, ವೇಷಭೂಷಣ ತಯಾರಕರು

ಕೊರೊನಾ ಕಾರಾಣಕ್ಕಾಗಿ ಜಾರಿಯಾಗಿರುವ ಲಾಕ್‍ಡೌನ್‍ನ ದುಷ್ಪರಿಣಾಮ ಎಲ್ಲರ ಮೇಲಾಗಿರುವಂತರಯೇ, ಅಶಕ್ತ ಯಕ್ಷಗಾನ ಕಲಾವಿದರೂ, ವೇಷಭೂಷಣ ಪರಿಕರ ಹಾಗೂ ರಂಗಸಜ್ಜಿಕೆ ತಯಾರಕರೂ ಸಹ ಇದರಿಂದ ಸಂಕಷ್ಠಕ್ಕೊಳಗಾಗಿದ್ದಾರೆ.

ಕಲಾವಿದರಿಗೆ ಸಹಾಯ ಮಾಡಿ ಎನ್ನುವ ಸಚಿವರು: ಕಲಾವಿದರೆನ್ನುವುದಕ್ಕೆ ದಾಖಲೆ ಕೊಡಿ ಎನ್ನುವ ಅಧಿಕಾರಿಗಳು

ಯಕ್ಷಗಾನ ಇದು ದಕ್ಷಿಣೋತ್ತರಕನ್ನಡ ಜಿಲ್ಲೆಯ ಗಂಡುಮೆಟ್ಟಿನ ಕಲೆ ಎಂದು ಪ್ರಸಿದ್ದಿಯನ್ನು ಪಡೆದಿದೆ. ಹಿಮ್ಮೇಳ, ಮುಮ್ಮೇಳ, ಪ್ರಸಾಧನ, ಚೌಕಿ ಮನೆಯ ಕೆಲಸಗಾರರು ಸೇರಿ ಸರಿ ಸುಮಾರು 4000 ಕ್ಕೂ ಹೆಚ್ಚಿನ ಯಕ್ಷಗಾನ ( ಬಡಗುತ್ತಿಟ್ಟು, ತೆಂಕುತಿಟ್ಟು) ಕಲಾವಿದರು ರಾಜ್ಯದಲ್ಲಿದ್ದಾರೆ. ಇವರಲ್ಲಿ ಧಾರ್ಮಿಕ ಕೇಂದ್ರಗಳು ನಡೆಸುವ ಬಯಲಾಟ ಮೇಳಗಳಲ್ಲಿ, ಮತ್ತೆ ಕೆಲವರು ಟೆಂಟ್ ಮೇಳಗಳಲ್ಲಿ ತೊಡಗಿಸಿಕೊಂಡರೆ, ಕೆಲವರು ಹವ್ಯಾಸಿ ಕಲಾವಿದರಿದ್ದಾರೆ. ಹಾಗೂ ಈ ಯಕ್ಷಗಾನವನ್ನೇ ತಮ್ಮ ದುಡಿಮೆಯನ್ನಾಗಿಸಿಕೊಂಡಿರುವ ಸಾವಿರಾರು ಅಶಕ್ತ ಯಕ್ಷಗಾನ ಕಲಾವಿದರು, ವೇಷಭೂಷಣ, ಬಣ್ಣ, ಪರಿಕರಗಳ ಕಲಾವಿದರು, ರಂಗ ಸಜ್ಜಿಕೆ, ವಿದ್ಯುತ್ ದೀಪಾಲಂಕಾರದ ಕೆಲಸಗಾರರೂ ಇದ್ದಾರೆ. ಭಾಗಶಹ ಇಂತಹ ಅಶಕ್ತ ಕಾರ್ಮಿಕರೆಲ್ಲರೂ ಸಹ ಈ ಕೊರೊನಾ ಕಾರಣದಿಂದಾಗಿ ಇದೀಗ ಸಂಕಷ್ಠದಲ್ಲಿದ್ದಾರೆ.

ಯಕ್ಷಗಾನದ ನಡೆಯುವುದೇ ಹೆಚ್ಚೆಂದರೆ ವರ್ಷದ ಆರು ತಿಂಗಳು ಮಾತ್ರ. ಅದೂ ಕೂಡಾ ಮಾರ್ಚ, ಎಪ್ರಿಲ್, ಮೇ ಎಂದರೆ ಈ ಕಲೆಗೆ ಸೀಜನ್. ಆದರೆ ಈ ಬಾರಿ ಈ ಸೀeನ್‍ನ್ನು ಕೊರೊನಾ ನುಂಗಿ ಹಾಕಿದೆ. ಕಲಾವಿದರು ಮನೆಯಲ್ಲುಳಿಯುವಂತಾಗಿದೆ, ಬದುಕು ಅತಂತ್ರವಾಗಿದೆ. ಸರಕಾರದ ಸಹಾಯ ಇವರಿಗೆ ತಲುಪದಂತಾಗಿದೆ.
ಕಲಾವಿದರು, ಪರಿಕರ ಕೆಲಸಗಾರರು: ಲಭ್ಯವಾಗಿರುವ ಮಾಹಿತಿಯ ಪ್ರಕಾರ ಉತ್ತರ ಕನ್ನಡದಲ್ಲಿ 500 ರಷ್ಟು ಹಿರಿ ಕಿರಿಯ ಯಕ್ಷಗಾನ ಕಲಾವಿದರಿದ್ದು, ಅವರಲ್ಲಿ 100ಕ್ಕೂ ಹೆಚ್ಚು ಅಶಕ್ತ ಯಕ್ಷಗಾನ ಕಲಾವಿದರಿದ್ದಾರೆ. 15 ರಿಂದ 20 ಯಕ್ಷಗಾನ ವೇಷಭೂಷಣ ತಯಾರಿಸುವ ಬಣ್ಣದ ಪರಿಕರ ಪೆಟ್ಟಿಗೆಗಳಿವೆ. ಒಂದರಲ್ಲಿ ಐದೇ ಜನ ಎಂದರೂ 100 ರಷ್ಟು ಕೆಲಸಗಾರರು ಇಲ್ಲಿದ್ದಾರೆ. ಇನ್ನು ನೂರಕ್ಕೂ ಹೆಚ್ಚು ಹಿಮ್ಮೇಳ ಕಲಾವಿದರು (ಭಾಗವತರು, ಮದ್ದಲೆ ವಾದಕರು, ಚಂಡೆ ವಾದಕರು) ಇದ್ದಾರೆ. ರಂಗ ಸಜ್ಜಿಕೆ, ದ್ವನಿವರ್ಧಕ, ವಿದ್ಯುತ್ ದೀಪಾಲಂಕಾರ ಮಾಡುವ ಕೆಲಸಗಾರು ನೂರರಷ್ಟಿದ್ದಾರೆ. ಇವರೆಲ್ಲರೂ ಸಹ ಯಕ್ಷಗಾನದೊಳಗೆ ಪ್ರತ್ಯಕ್ಷ, ಪರೋಕ್ಷವಾಗಿ ಬರುವ ಅಶಕ್ತ ಕಲಾವಿದರೇ ಆಗಿದ್ದಾರೆ. ಇಂತಹ ಸಾವಿರಾರು ಅಶಕ್ತ ಯಕ್ಷಗಾನ ಕಲಾವಿದರು, ಪರಿಕರ ಕೆಲಸಗಾರರು ಇದೀಗ ಸಂಕಷ್ಠದಲ್ಲಿದ್ದಾರೆ.

ದಾಖಲೆ ಎಲ್ಲಿಂದ ತರುವುದು : ಜಾನಪದ ಪರಿಷತ್‍ನಿಂದ ಕಲಾವಿದರ ನೊಂದಣಿ ಈಗ ನಡೆಯುತ್ತಿದೆಯಾದರೂ ಫಲಪ್ರದವಾಗುತ್ತಿಲ್ಲ. ಯಕ್ಷಗಾನ ಅಕಾಡೆಮಿ ಮೌನವಾಗಿದೆ. ಈ ನಡುವೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರು ಯಕ್ಷಗಾನ ಹಾಗೂ ಎಲ್ಲ ಬಡ ಕಲಾವಿದರಿಗೂ ಸಹ ಧಾನಿಗಳಿಂದ ಬರುವ ಆಹಾರ ಸಾಮಗ್ರಿಗಳನ್ನು ಪೂರೈಸಬೇಕು ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ, ತಹಶಿಲ್ದಾರರಿಗೆ ಸೂಚಿಸಿದ್ದಾರೆ. ಹೆಸರು ನೊಂದಾಯಿಸಿಕೊಳ್ಳಲೂ ನಿರ್ದೇಶಿಸಿದ್ದಾರೆ. ಹಾಗೆ ಅಶಕ್ತ ಕಲಾವಿದರು ಸಹಾಯ ಕೇಳಿ ಹೆಸರು ನೊಂದಾಯಿಸಿಕೊಳ್ಳಲು ಹೋದರೆ ‘ನೀವು ಯಕ್ಷಗಾನ ಕಲವಿದ ಎನ್ನುವುದಕ್ಕೆ ದಾಖಲೆ ಕೊಡಿ’ ಎನ್ನುತ್ತಾರೆ ಅಧಿಕಾರಿಗಳು. ಆ ಬಡ ಕಲಾವಿದ, ಪರಿಕರ ಕೆಲಸಗಾರ ದಾಖಲೆಯನ್ನು ಎಲ್ಲಿಂದ ತರುವುದು ಎಂಬುದೇ ಸಮಸ್ಯೆಯಾಗಿದೆ. ಇತ್ತ ದಾಖಲೆಯೂ ಇಲ್ಲ. ಸರಕಾರದ ಸವಲತ್ತೂ ದೊರೆಯುತ್ತಿಲ್ಲ ಎಂಬ ಅಸಹಾಯಕತೆಯಲ್ಲಿ ಅವರಿದ್ದಾರೆ.

ಇಲ್ಲಿಯವರೆಗೂ ನೊಂದಣಿಯಾಗಿಲ್ಲ: ಭಾಗಶಹ ಎಲ್ಲ ಕಾರ್ಮಿಕರೂ ಸಹ ಒಂದಲ್ಲ ಒಂದು ಇಲಾಖೆಯಲ್ಲಿ ನೊಂದಣಿಯಾಗುತ್ತಾರೆ. ಸರಕಾರದ ಸಹಾಯ ಪಡೆಯುತ್ತಾರೆ. ಆದರೆ ಕಲೆಯನ್ನೇ ಬದುಕನ್ನಾಗಿಸಿಕೊಂಡಿರುವ ಯಕ್ಷಗಾನ ಕಲಾವಿದರು ಮಾತ್ರ ಇಲ್ಲಿಯವರೆಗೂ ಎಲ್ಲಿಯೂ ನೊಂದಣಿಯಾಗದೇ ಅಸಂಘಟಿತರಾಗಿಯೇ ಉಳಿದಿರುವುದು, ಜೊತೆಗೆ ಈ ಬಗ್ಗೆ ಯಕ್ಷಗಾನ ಅಕಾಡೆÀಮಿಯವರೂ ಸಹ ಯಾವುದೇ ಚಿಂತನೆ ನಡೆಸದಿರುವುದು ವಿಪರ್ಯಾಸವಾಗಿದೆ. ಒಂದೊಮ್ಮೆ ಕಲಾವಿದರು ನೊಂದಣಿಯಾಗಿದ್ದರೆ ಇಂದು ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ದಕ್ಷಿಣ ಕನ್ನಡದಲ್ಲಿ ಪಟ್ಲ್ ಪೌಂಡೇಷನ್ ಮೂಲಕ ಭಾಗವತ ಪಟ್ಲ ಸತೀಶರವರು ಅಶಕ್ತ ಯಕ್ಷಗಾನ ಕಲಾವಿದರಿಗೆ ಸಹಾಯ ಮಾಡುತ್ತಿದ್ದಾರೆ. ಉಚಿತ ಬಸ್‍ಪಾಸ್ ವಿತರಿಸಿದ್ದಾರೆ. ವ್ಯಕ್ತಿಯೋರ್ವ ಇಂತಹ ಕೆಲಸ ಮಾಡುವಾಗ ಯಕ್ಷಗಾನ ಅಕಾಡೆಮಿ ಅಥವಾ ಸರಕಾರದಿಂದ ಇದು ಯಾಕೆ ಸಾದ್ಯವಾಗುವುದಿಲ್ಲ ಎಂಬುದು ಪ್ರಶ್ನೆಯಾಗಿದೆ.
ಧಾರ್ಮಿಕ ಮೇಳಗಳಿಗೆ ಸಹಾಯ: ದಕ್ಷಿಣ ಕನ್ನಡದಲ್ಲಿ ಮುಜರಾಯಿ ಇಲಾಖೆಗೊಳಪಟ್ಟ ಧಾರ್ಮಿಕ ಕೇಂದ್ರಗಳಿಂದ ನಡೆಯಲ್ಪಡುವ ಆರೇಳು ಯಕ್ಷಗಾನ ಮೇಳಗಳಿವೆ. ಇಲ್ಲಿರುವ ಎಲ್ಲ ಕಲಾವಿದರಿಗೆ ಕೊರೊನಾ ಕಾರಣದಿಂದ ಧಾರ್ಮಿಕ ದತ್ತಿ ಇಲಾಖೆಯಿಂದ ಈಗಾಗಲೇ ಸಹಾಯ ಮಾಡಲಾಗಿದೆ. ಆದರೆ ಇನ್ನುಳಿದ ಟೆಂಟ್ ಮೇಳಗಳಿಗೆ ಯಾವ ಸಹಶಯವಿಲ್ಲ. ಬೇಸಿಗೆಯ ಮೂರು ತಿಂಗಳು ಪ್ರದರ್ಶನವಿಲ್ಲದ ಕಾರಣ ಮೇಳದ ಯಜಮಾನ ಕೂಡಾ ಕಲಾವಿದನಿಗೆ ಮಾತುಕೊಟ್ದಂತೆ ವಾರ್ಷಿಕ ಹಣ ನೀಡಲಾರ. ಒಟ್ಟಾರೆ ರಾಜ್ಯದಲ್ಲಿ ಮೇಳ ಮತ್ತು ಇತರೆ ಕಲಾವಿದರೂ ಹಾಗೂ ಇತರೆ ಕೆಲಸಗಾರರೂ ಸೇರಿದಂತೆ ಸುಮಾರು 4 ಸಾವಿರದಷ್ಟು ಕಲಾವಿದ ಕೆಲಸಗಾರರಿದ್ದು, ಈ ಎಲ್ಲ ಕಲಾವಿದರಿಗೂ ಸಹ ಸಹಾಯಧನ ದೊರೆಯಬೇಕಿದೆ.


ಯಾರ್ಯಾರು ಏನೇನೆಂದರು

ಸದ್ಯ ಕೊರೊನಾ ಸಂಕಷ್ಠ ಕಾಲದಲ್ಲಿದ್ದ ಸಾಂಸ್ಕøತಿಕ ವಲಯದ ಅಶಕ್ತ ಕಲಾವಿದರಿಗೆ ಆಡಳಿತ ದಾಖಲೆ ಕೇಳದೇ ಮಾನವೀಯತೆ ದೃಷ್ಠಿಯಿಂದ ಸಹಾಯ ಮಾಡಬೇಕು. ಸ್ಥಳಿÀಯ ಜನಪ್ರತಿನಿದಿಗಳ ಪ್ರಮಾಣ ಪತ್ರ ಪಡೆದು ಕಲಾವಿದರ ನೊಂದಣಿ ಮಾಡಿಕೊಂಡು ಅವರಿಗೆ ಸಹಯ ಮಾಡುವಂತಾಗಬೇಕು.

ಎಂ.ಎಂ. ಹೆಗಡೆ, ಅಧ್ಯಕ್ಷರು, ಯಕ್ಷಗಾನ ಅಕಾಡೆಮಿ

ರಾಜ್ಯದಲ್ಲಿ ಸರಿಸುಮಾರು 3500ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರಿದ್ದಾರೆ. ಯಕ್ಷಗಾನ ಅಕಾಡೆಮಿ ಹಾಗೂ ಸರಕಾರ ಸಂಕಷ್ಠದಲ್ಲಿರುವ ಕಲಾವಿದರ ಬಗ್ಗೆ ಚಿಂತನೆ ನಡೆಸಬೇಕು. ಕಲಾವಿದರ ಬದುಕು ದುಸ್ತರವಾಗದಂತೆ ನೋಡಿಕೊಳ್ಳಬೇಕು. ನಾವು ನಮ್ಮ ಅಭಿಮಾನಿಗಳಿಂದ ಪಡೆದು ಬಡ ಕಲಾವಿದರಿಗೆ ಸಹಾಯ ಮಾಡುತ್ತಿದ್ದೇವೆ.

-ರಾಘವೇಂದ್ರ ಮಯ್ಯ, ಭಾಗವತರು, ಹಾಲಾಡಿ, ಉಡುಪಿ

ಯಕ್ಷಗಾನಕ್ಕೆ ವೇಷಭೂಷಣ ಪರಿಕರ ಕೆಲಸಗಾರರು ಬೇಕೇ ಬೇಕು. ಇದೀಗ ನಾವು ಬಹಳ ಸಂಕಷ್ಠದಲ್ಲಿದ್ದೇವೆ. ಇಲಾಖೆಯಲ್ಲಿ ಸಹಾಯ ಕೇಳಲು ಹೋದರೆ ನಮ್ಮ ಕಲೆಗೇ ದಾಖಲೆ ಕೇಳುತ್ತಾರೆ. ನಾವು ಎಲ್ಲಿಂದ ದಾಖಲೆ ತರುವುದು. ನಮಗೊಂದು ಗುರುತಿನ ಚೀಟಿಯೂ ಇಲ್ಲದಿರುವುದು ಬೇಸರ ಸಂಗತಿ.

ಚಂದು ನಾಯ್ಕ (ಬಣ್ಣದ ಚಂದು), ವೇಷಭೂಷಣ ತಯಾರಕರು, ಅಂಕೋಲಾ

ಕಳೆದ ಹಲವಾರು ವರ್ಷಗಳಿಂದ ಯಕ್ಷಗಾನವನ್ನೇ ಬದುಕನ್ನಾಗಿಸಿಕೊಂಡವರು ನಾವು. ಈಗ ಕೊರೊನಾ ಕಾರಣಕ್ಕೆ ದುಡಿಮೆಯಿಲ್ಲದೇ ಮನೆಯಲ್ಲಿದ್ದೇವೆ. ಯಕ್ಷಗಾನದಂತಹ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲು ಇನ್ನೂ ಆರು ತಿಂಗಳು, ವರ್ಷವೇ ಕಳೆಯಬಹುದು. ಹಾಗಾಗಿ ಬೇರೆ ಏನಾದರೂ ಕೆಲಸ ಮಾಡೋಣ ಅಂದ್ಕೊಂಡಿದ್ದೀವಿ.

-ರಮೇಶ ಭಂಡಾರಿ, ಮುರೂರು, ಹಿರಿಯ ಹಾಸ್ಯ ಕಲಾವಿದ
Exit mobile version